ಧರ್ಮಸ್ಥಳ ಪ್ರಕರಣ : ದೂರುದಾರ ಚಿನ್ನಯ್ಯ ಅರೆಸ್ಟ್ ಆಗಿದ್ಯಾಕೆ ?
Dharmasthala Case: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಅನ್ನೋ ಆರೋಪದ ಮೂಲಕವೇ ವಿಶ್ವದಾದ್ಯಂತ ಸದ್ದು ಮಾಡಿದ್ದ ದೂರುದಾರ ಚಿನ್ನಯ್ಯ ಕೊನೆಗೂ ಅರೆಸ್ಟ್ ಆಗಿದ್ದಾನೆ. ಹಾಗಾದ್ರೆ ಎಸ್ಐಟಿ ದೂರುದಾರನನ್ನೇ ಯಾಕೆ ಅರೆಸ್ಟ್ ಮಾಡಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ.
ಮಂಡ್ಯ (Mandya) ಮೂಲದ ಸಿ.ಎನ್. ಚಿನ್ನಯ್ಯ ಅಲಿಯಾಸ್ ಮಾಸ್ಕ್ಮ್ಯಾನ್, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ಪೊಲೀಸರಿಗೆ ದೂರು ನೀಡಿದ್ದ. ದೂರುದಾರ. ಈತ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದನೆಂದು ಹೇಳಿಕೊಂಡಿದ್ದ. ಹೆಣಗಳಿಂದ ಚಿನ್ನಾಭರಣ ಕದಿಯುತ್ತಿದ್ದ ಹಿನ್ನೆಲೆಗೆ ಈತನಿಗೆ ಚಿನ್ನಯ್ಯ ಎಂಬ ಹೆಸರು ಬಂದಿದೆ ಎಂದು ವರದಿಯಾಗಿದೆ.
ಎಸ್ಐಟಿ ತನಿಖೆ ವೇಳೆ ಚಿನ್ನಯ್ಯ ತೋರಿಸಿದ ಹಲವು ಸ್ಥಳಗಳಲ್ಲಿ ಉತ್ಖನನ ನಡೆಸಿದರೂ, ಆತನ ಆರೋಪಗಳಿಗೆ ಪುಷ್ಟಿ ನೀಡುವಂತಹ ಯಾವುದೇ ಗಮನಾರ್ಹ ಪುರಾವೆಗಳು ಪತ್ತೆಯಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಮತ್ತು ಸುಳ್ಳು ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ ಆರೋಪದ ಮೇಲೆ, ಎಸ್ಐಟಿ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಲಯವು ಚಿನ್ನಯ್ಯನನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈ ಬೆಳವಣಿಗೆಯಿಂದ ಪ್ರಕರಣವು ಹೊಸ ತಿರುವು ಪಡೆದಿದೆ. ಎಸ್ಐಟಿ ಚಿನ್ನಯ್ಯನನ್ನು ಕೂಲಂಕುಷವಾಗಿ ವಿಚಾರಣೆಗೊಳಪಡಿಸಲಿದ್ದು, ಆತನ ಆರೋಪಗಳ ಹಿಂದಿನ ಉದ್ದೇಶ, ಈ ಷಡ್ಯಂತ್ರದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಕಲೆಹಾಕಲಿದೆ.
ಆತನಿಂದ ಸಿಗುವ ಮಾಹಿತಿಯನ್ನು ಆಧರಿಸಿ, ಪ್ರಕರಣದ ಮುಂದಿನ ತನಿಖೆಯ ದಿಕ್ಕು ನಿರ್ಧರಿತವಾಗಲಿದೆ. ಒಂದು ವೇಳೆ ಆರೋಪಗಳು ಸುಳ್ಳು ಎಂದು ಸಾಬೀತಾದರೆ, ಆತನ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ.
ಚಿನ್ನಯ್ಯ ಬುರುಡೆ ತಂದು ಸಿಕ್ಕಿಬಿದ್ದ ..!
ದೂರುದಾರ ಚಿನ್ನಯ್ಯ ಪೊಲೀಸರಿಗೆ ದೂರು ನೀಡುವ ವೇಳೆಯಲ್ಲಿಯೇ ಬುರುಡೆಯನ್ನು ತಂದಿದ್ದಾನೆ. ಆದರೆ ಈ ಬುರುಡೆಯನ್ನು ಆತ ಭೂಮಿಯ ಅಡಿಯಿಂದ ಅಗೆದು ತಂದಿಲ್ಲ ಎನ್ನಲಾಗುತ್ತಿದೆ. ಈ ಪ್ರಕರಣದ ಸೂತ್ರಧಾರಿಗಳೇ ಈತನ ಕೈಗೆ ಬುರುಡೆ ಕೊಟ್ಟು ಕಳುಹಿಸಿದ್ದರು ಅನ್ನೋ ಮಾಹಿತಿಯನ್ನು ಚಿನ್ನಯ್ಯ ಎಸ್ಐಟಿ ಅಧಿಕಾರಿಗಳಿಗೆ ನೀಡಿದ್ದಾನೆ ಎನ್ನಲಾಗುತ್ತಿದೆ.
ಮಾತ್ರವಲ್ಲ ಬುರುಡೆ ರಹಸ್ಯ ಒಂದು ವ್ಯವಸ್ಥಿತ ಷಡ್ಯಂತ್ರ ಅನ್ನೋ ಮಾಹಿತಿಯನ್ನು ದೂರುದಾರ ವಿಚಾರಣೆಯ ವೇಳೆಯಲ್ಲಿ ಬಾಯ್ಬಿಟ್ಟಿದ್ದಾನೆ. ತನಗೆ ಈ ಪ್ರಕರಣದಲ್ಲಿ ಯಾರೆಲ್ಲಾ ಸಹಕಾರ ನೀಡಿದ್ದಾರೆ ಅನ್ನೋ ಮಾಹಿತಿಯನ್ನು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನಿಗೆ ಬೆಂಬಲ ನೀಡಿದವರನ್ನು ಕೂಡ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆಯಿದೆ.
ಚಿನ್ನಯ್ಯನ ಹಿಂದೆ ಇರುವವರು ಯಾರು ?
ಧರ್ಮಸ್ಥಳದ ವಿರುದ್ದ ಷಡ್ಯಂತ್ರ ನಡೆದಿದೆ ಅನ್ನೋದು ಖಚಿತವಾಗಿದೆ. ಚಿನ್ನಯ್ಯ ಬಂಧನದ ಬೆನ್ನಲ್ಲೇ ಈತನ ಹಿಂದೆ ಇರುವವರು ಯಾರು ಅನ್ನೋ ಪ್ರಶ್ನೆ ಎದ್ದಿದೆ. ಎಸ್ಐಟಿ ಅಧಿಕಾರಿಗಳು ಇದೀಗ ಚಿನ್ನಯ್ಯನಿಗೆ ಬೆಂಬಲ ನೀಡಿದವರ ವಿರುದ್ದ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.



