ಉದಯಕುಮಾರ್ ಶೆಟ್ಟಿ ಪಿಐಎಲ್ ಗೂ ನಮಗೂ ಸಂಬಂಧವಿಲ್ಲ: ಅಂತರ ಕಾಯ್ದುಕೊಂಡ ಸಮಿತಿ, ಡಿಸಿಎಂ ಹೇಳಿಕೆಗೂ ಕೊಡಲಿ ಸ್ಪಷ್ಟನೆ
Karkala Parashurama Statue: ಕಾರ್ಕಳ ಪರಶುರಾಮ ಥೀಂ ಪಾರ್ಕ್ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿಯವರಿಗೆ ಮತ್ತೊಂದು ಸುತ್ತಿನ ಹಿನ್ನಡೆಯಾಗಿದ್ದು, ಪ್ರತಿಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಪಿಐಎಲ್ ನ ಸಾಧಕ ಬಾಧಕಗಳಿಗೆ ಉದಯಕುಮಾರ್ ಶೆಟ್ಟರೇ ಹೊಣೆ ಎಂದು ಪರಶುರಾಮ ಥೀಂ ಪಾರ್ಕ್ ಹಿತರಕ್ಷಣಾ ಸಮಿತಿ ಹೇಳಿಕೆ ನೀಡಿದೆ.
ಈ ಸಂಬಂಧ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಮಿತಿ, ಉದಯಕುಮಾರ್ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರದಲ್ಲಿ ತಟಸ್ಥವಾಗಿರಲು ನಿರ್ಧರಿಸಲಾಗಿದ್ದು, ಸಾಧಕ, ಭಾದಕಗಳಿಗೆ ಅರ್ಜಿದಾರರೇ ಜವಾಬುದಾರರು.
ಏಕೆಂದರೆ ಈ ನಿರ್ಣಯ ತೆಗೆದುಕೊಳ್ಳುವುದಕ್ಕೆ ಮುನ್ನ ಅವರು ಸಮಿತಿ ಜತೆಗೆ ಯಾವುದೇ ಚರ್ಚೆ ನಡೆಸಿಲ್ಲ. ಇದಕ್ಕೂ ಸಮಿತಿ ನಡೆಸುತ್ತಿರುವ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಥೀಂ ಪಾರ್ಕ್ ವಿಚಾರವಾಗಿ ಬಿಜೆಪಿ ನಡೆಸಲು ಉದ್ದೇಶಿಸಿರುವ ಬೈಕ್ ರ್ಯಾಲಿಗೆ ಒಂದು ದಿನ ಮುಂಚಿತವಾಗಿ ಸಮಿತಿ ಈ ನಿರ್ಣಯ ತೆಗೆದುಕೊಂಡಿರುವುದು ಉದಯಕುಮಾರ್ ಶೆಟ್ಟಿಯವರಿಗೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉದಯಕುಮಾರ್ ಶೆಟ್ಟಿಯವರ ಮೂಲ ನಿಲುವಿನಲ್ಲಿ ಬದಲಾವಣೆಯಾಗಿದ್ದಲ್ಲಿ ನಾವು ಹೊಣೆಗಾರರಲ್ಲ. ಅದೇ ರೀತಿ ಪ್ರತಿಮೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಉದಯಕುಮಾರ್ ಶೆಟ್ಟಿ ಸ್ಪಷ್ಟನೆ ನೀಡಬೇಕೇ ವಿನಾ ಸಮಿತಿಯಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕಾರ್ಕಳ ಪರಶುರಾಮ ಪ್ರತಿಮೆ ಪ್ರಕರಣ : ನ್ಯಾಯಾಲಯಕ್ಕೆ ಮುನಿಯಾಲು ಪಿಐಎಲ್ ಸಲ್ಲಿಕೆ
Karkala parashurama theme park controversy big updates muniyalu uday Kumar shetty



