ಕರಾವಳಿ ಭಾಗದಲ್ಲಿ ಇಂದು ಸೂರ್ಯನ ಅಟ್ಟಹಾಸ : ತೇವಾಂಶ ಭರಿತ ವಾತಾವರಣದಿಂದ ಜನತೆ ಹೈರಾಣಾಗೋದು ಪಕ್ಕಾ
Karnataka Weather Forecast: ರಾಜ್ಯದಲ್ಲಿ ಆಗಾಗ ತಂಪರೆಯುತ್ತಿದ್ದ ವರುಣ ಇಂದಿನಿಂದ ವಿರಾಮ ಪಡೆದುಕೊಳ್ಳಲಿದ್ದಾನೆ. ರಾಜ್ಯದ ಕೆಲವೇ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಬಹುದೆಂದು ನಿರೀಕ್ಷಿಸಲಾಗಿದೆಯಾದರೂ ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಖರ ಸೂರ್ಯನ ಶಾಖವೇ ಇರಲಿದೆ. ಅದರಲ್ಲೂ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಹಾಗೂ ಉತ್ತರ ಕನ್ನಡದ ಜನತೆಗೆ ಮನೆಯಿಂದ ಹೊರಬರುವ ಮುನ್ನ ನೂರು ಭಾರಿ ಯೋಚಿಸುವುದು ಉತ್ತಮ.
ಇಂದು ಬೆಳಗ್ಗೆಯಿಂದಲೇ ಕರಾವಳಿ ಜಿಲ್ಲೆಗಳಲ್ಲಿ ಹಾಟ್ ಆ್ಯಂಡ್ ಹ್ಯೂಮಿಡ್ ಇರಲಿದ್ದು ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇಂದು ಬಿಸಿಲಿನ ತೀವ್ರತೆ ಅತ್ಯಂತ ಪ್ರಖರವಾಗಿ ಇರಲಿದ್ದು, ಇದರ ಜೊತೆಯಲ್ಲಿ ಉಸಿರುಗಟ್ಟಿಸುವಂತಹ ತೇವಾಂಶಭರಿತ ವಾತಾವರಣ ಕೂಡ ಇರಲಿದ್ದು ಜನತೆ ಸೆಖೆಯಲ್ಲಿ ಇಂದು ಬೆಂದು ಹೋಗಲಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣ ಇನ್ಮುಂದೆ ನಗದುಮುಕ್ತ..! ಏಪ್ರಿಲ್ 10ರಿಂದ ಯುಪಿಐ ಪಾವತಿಗೆ ಮಾತ್ರ ಅವಕಾಶ
ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸರಿಸುಮಾರು 32°C ನಿಂದ 34°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ತೇವಾಂಶ ಹೆಚ್ಚಿರುವುದರಿಂದ ಮನುಷ್ಯನ ದೇಹಕ್ಕೆ ಇದು 40°C ಗಿಂತಲೂ ಹೆಚ್ಚಿನ ಶಾಖದ ಅನುಭವ ಸಿಗಲಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣ ಶೇ. 70ಕ್ಕಿಂತ ಹೆಚ್ಚಿರುವುದರಿಂದ ವಿಪರೀತ ಬೆವರು ಮತ್ತು ಉಸಿರುಗಟ್ಟಿಸುವ ಅನುಭವ ಜನತೆಗೆ ಆಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಠ 32°C – 33°C ಇರಲಿದ್ದು ವಾತಾವರಣ ವಿಪರೀತ ಸೆಖೆ ಮತ್ತು ಆರ್ದ್ರತೆಯಿಂದ ಕೂಡಲಿರಲಿದೆ. ಇನ್ನು ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 32°C – 34°C ಇರಲಿದ್ದು ಮೋಡ ಕವಿದ ವಾತಾವರಣದ ಜೊತೆಯಲ್ಲಿ ಉಸಿರುಗಟ್ಟಿಸುವಂತಹ ಹವಾಮಾನ ಇರಲಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಗರಿಷ್ಠ ತಾಪಮಾನ 30°C – 32°C ಇದ್ದು ತೇವಾಂಶ ಭರಿತ ಬಿಸಿಗಾಳಿ ಇರಲಿದೆ ಎಂದು ಐಎಂಡಿ ತಿಳಿಸಿದೆ.



