Ghanavi : ಹಬ್ಬದ ದಿನದಂದೇ ನವ ವಿವಾಹಿತೆ ಗಾನವಿ ಸಂಶಯಾಸ್ಪದ ಸಾವು

ಚಿಕ್ಕಮಗಳೂರು : ಎಲ್ಲೆಲ್ಲೂ ಯುಗಾದಿ ಸಂಭ್ರಮ ಮೇಳೈಸಿದ್ದರೆ. ಈ ಮನೆಯಲ್ಲಿ ಮಾತ್ರ ಸೂತಕದ ಛಾಯೆ. ಮದುವೆಯಾಗಿ ವರ್ಷ ಕಳೆಯುವುದರೊಳಗೆ ನವ ವಿವಾಹಿತೆಯೋರ್ವಳು (Ghanavi ) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಪತಿ ಹಾಗೂ ಮನೆಯವರು ಇಲಿ ಪಾಷಾಣ ನೀಡಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣದ ಬೆನ್ನಲ್ಲೇ ಮಾವನನ್ನು ಪೊಲೀಸರು ಬಂಧಿಸಿದ್ರೆ, ಇತ್ತ ಆಸ್ಪತ್ರೆಯಲ್ಲಿದ್ದ ಪತಿ ಪರಾರಿಯಾಗಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿ (27 ವರ್ಷ ) ಎಂಬಾಕೆಯೇ ಸಾವಿಗೀಡಾದ ಯುವತಿ. ಗಾನವಿಯನ್ನು ಕಾರಬೈಲು ಗ್ರಾಮದ ನಂದೀಪ್‌ ಎಂಬಾತನಿಗೆ ಕೊಟ್ಟು ಕಳೆದ ವರ್ಷ ಮದುವೆ ಮಾಡಲಾಗಿತ್ತು. ಎಂಎ ಪದವೀಧರೆಯಾಗಿದ್ದ ಗಾನವಿ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಳು. ಮದುವೆಯಾದ ನಂತರದಲ್ಲಿ ಉದ್ಯೋಗವನ್ನು ತೊರೆದು ಪತಿಯೊಂದಿಗೆ ವಾಸವಾಗಿದ್ದಳು. ಮದುವೆಯಾದ ಮೂರೇ ತಿಂಗಳಲ್ಲಿ ನಂದೀಪ್‌ನ ನಿಜ ಬಣ್ಣ ಬಯಲಾಗಿತ್ತು. ಗಾನವಿಯನ್ನು ಹಣಕ್ಕಾಗಿ ನಿತ್ಯವೂ ಪೀಡಿಸುವುದಕ್ಕೆ ಶುರು ಮಾಡಿದ್ದಾನೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ತವರು ಮನೆಯಿಂದ 2 ಲಕ್ಷ ರೂಪಾಯಿ ಹಣವನ್ನೂ ಕೂಡ ತರಿಸಿಕೊಂಡಿದ್ದ.

ನಿತ್ಯವೂ ಗಾನವಿಗೆ ಮಾನಸಿಕ ಹಾಗೂ ದೈಹಿಕವಾಗಿಯೂ ಹಲ್ಲೆ ಮಾಡಿದ್ದು, ಕಳೆದ ಮೂರು ತಿಂಗಳ ಹಿಂದೆ ಗಾನವಿ ಗಂಡನ ಮನೆಯನ್ನು ತೊರೆದು ತನ್ನ ತವರು ಮನೆಯನ್ನು ಸೇರಿಕೊಂಡಿದ್ದಳು. ಆದರೆ ನಂದೀಪ್‌ ಇನ್ಮುಂದೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡಿ ಮತ್ತೆ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಮನೆಗೆ ಹೋದ ನಂತರದಲ್ಲಿ ಮತ್ತೆ ಕಿರುಕುಳ ನೀಡುವುದಕ್ಕೆ ಶುರು ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದೀಗ ಪತಿ ನಂದೀಪ್‌ ಹಾಗೂ ಮನೆಯವರು ಸೇರಿಕೊಂಡು ಗಾನವಿಗೆ ಇಲಿಪಾಷಾಣ ತಿನ್ನಿಸಿರುವ ಆರೋಪ ಕೇಳಿಬಂದಿದೆ. ಗಾನವಿ ಪೋಷಕರು ಯಾವ ಕಾರಣಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೀರಿ ಎಂದು ಕೇಳಿದಾಗ ಜಾಂಡಿಸ್‌ ಎಂದು ನಾಟಕವಾಡಿದ್ದಾರೆ. ಗಾನವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪತಿ ನಂದಿಪ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೇಗೌಡ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಹೊರಿಸಲಾಗಿದೆ. ಗಾನವಿಗೆ ವಿಷ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ಮೂಡಿಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಂದೀಪ್‌ ಆಸ್ಪತ್ರೆಯಿಂದಲೇ ಪರಾರಿಯಾಗಿದ್ದರೆ, ಮಾವ ಚಂದ್ರೇಗೌಡನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದು, ವಿಚಾರಣೆಯನ್ನು ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯ ನಂತರವಷ್ಟೇ ಗಾನವಿ ಸಾವಿನ ಹಿಂದಿನ ರಹಸ್ಯ ಬಯಲಾಗಲು ಸಾಧ್ಯ.

ಗಾನವಿ ಮದುವೆಗೂ ಮುನ್ನ ಮತ್ತೊಬ್ಬಾಕೆಯ ಜೊತೆ ಪ್ರೀತಿ

ಗಾನವಿಯನ್ನು ಮದುವೆಯಾಗುವ ಮೊದಲೇ ನಂದೀಪ ಮತ್ತೊಬ್ಬ ಹುಡುಗಿಯೊಬ್ಬಳನ್ನ ಲವ್ ಮಾಡಿದ್ದ. ನಂದೀಪ್‌ನ ವಿಚಾರಗಳು ತಿಳಿಯದೇ ಗಾನವಿ ಆತನನ್ನು ಮದುವೆಯಾಗಿದ್ದಳು. ಪತಿಯೊಂದಿಗೆ ಸುಂದರ ಭವಿಷ್ಯದ ಕನಸು ಕಂಡಿದ್ದ ಗಾನವಿ ತನ್ನ ಕೆಲಸವನ್ನೂ ತೊರೆದಿದ್ದಳು. ಅಲ್ಲದೇ ನಂದೀಪ್‌ ತಾವು ಪ್ರೀತಿಸಿದ್ದ ಯುವತಿಯ ಕೊಲೆಗೂ ಯತ್ನಿಸಿದ್ದ ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಇದನ್ನೂ ಓದಿ : Tuition teacher : ಟ್ಯೂಷನ್ ಟೀಚರ್ ಸ್ನಾನದ ವೀಡಿಯೋ ಸೆರೆ : ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು

ಇದನ್ನೂ ಓದಿ : ಐಎಂಎ ಗ್ರಾಹಕರಿಗೆ ಸಿಹಿಸುದ್ದಿ: ನಿಯಮ ಪಾಲಿಸಿದ್ರೇ ವಾಪಸ್ ಸಿಗುತ್ತೆ ನಿಮ್ಮ ಚಿನ್ನ

Newly Married Women Ghanavi Suspected Death In Chikkamagalore

Comments are closed.