ಕುಂದಾಪುರ: ಹಳೇ ದ್ವೇಷ ಯುವಕನ ಮೇಲೆ ಸೋಡಾ ಬಾಟಲಿ, ಹೆಲ್ಮೆಟ್ನಿಂದ ಹಲ್ಲೆ
ಕುಂದಾಪುರದ ಕುಂಬಾಶಿಯ ಕೊರವಡಿ ಬಳಿ ಹಳೇ ದ್ವೇಷಕ್ಕೆ ಯುವಕನ ಮೇಲೆ ಸೋಡಾ ಬಾಟಲಿ ಹಾಗೂ ಹೆಲ್ಮೆಟ್ನಿಂದ ಭೀಕರ ಹಲ್ಲೆ ನಡೆಸಲಾಗಿದ್ದು, ಏಳು ಮಂದಿ ವಿರುದ್ಧ ಕುಂದಾಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕುಂದಾಪುರ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೋರ್ವನ ಮೇಲೆ ಏಳು ಮಂದಿಯ ಗ್ಯಾಂಗ್ ಸೋಡಾ ಬಾಟಲಿ ಹಾಗೂ ಹೆಲ್ಮೆಟ್ನಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿರುವ ಘಟನೆ ಕುಂಬಾಶಿಯ ಕೊರವಡಿ ಎಂಬಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಸದ್ಯ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ತೆಕ್ಕಟ್ಟೆ ಗ್ರಾಮದ ನಿವಾಸಿ ರಂಜಿತ್ ಎಂಬುವವರೇ ಹಲ್ಲೆಗೊಳಗಾದ ಯುವಕ. ಮೇ 17ರಂದು ರಾತ್ರಿ 10 ಗಂಟೆಯ ಸುಮಾರಿಗೆ ಕೆಲಸ ಮುಗಿಸಿ ರಂಜಿತ್ ಮನೆಗೆ ಮರಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮಳೆ ಸುರಿದ ಹಿನ್ನೆಲೆಯಲ್ಲಿ ಕುಂಬಾಶಿಯ ಕೊರವಡಿ ಬಳಿಯ ಶ್ರೀ ಸಿದ್ದಿ ಜನರಲ್ ಸ್ಟೋರ್ ಎದುರು ತಮ್ಮ ಬೈಕ್ ನಿಲ್ಲಿಸಿದ್ದರು.
Also Read : ವಿಮಾನದಲ್ಲೇ ಗಗನಸಖಿಗೆ ಕಿರುಕುಳ! ಕೇರಳ ಮೂಲದ ಪ್ರಯಾಣಿಕ ಬಂಧನ
ಏಳು ಜನರ ಗ್ಯಾಂಗ್ನಿಂದ ಅಟ್ಯಾಕ್
ರಂಜಿತ್ ಬೈಕ್ ನಿಲ್ಲಿಸಿ ನಿಂತಿದ್ದಾಗ ಸ್ಥಳಕ್ಕೆ ಧಾವಿಸಿದ ವಿಕಾಸ ಪೂಜಾರಿ, ಶರತ್ ಪೂಜಾರಿ, ಮಹೇಂದ್ರ ಪೂಜಾರಿ, ಸುಕೇಶ್ ಪೂಜಾರಿ, ಅಭಿಲಾಷ್ ಪೂಜಾರಿ, ಮಂಜುನಾಥ ಮತ್ತು ಸಂದೇಶ್ ಎಂಬ ಏಳು ಮಂದಿ ಆರೋಪಿಗಳ ತಂಡ ಒಟ್ಟು ಸೇರಿ, ಕೊಲ್ಲುವ ಉದ್ದೇಶದಿಂದಲೇ ರಂಜಿತ್ ಮೇಲೆ ಮುಗಿಬಿದ್ದಿದೆ. ಸೋಡಾ ಬಾಟಲಿ ಹಾಗೂ ಹೆಲ್ಮೆಟ್ನಿಂದ ಮನಬಂದಂತೆ ಜಜ್ಜಿದ್ದರಿಂದ ರಂಜಿತ್ ಅವರ ತುಟಿ ಹಾಗೂ ದವಡೆಗೆ ಬಲವಾದ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು.
ಕೂಡಲೇ ಸಹೋದರ ರಾಘವೇಂದ್ರ ಸ್ಥಳಕ್ಕೆ ಧಾವಿಸಿ, ರಂಜಿತ್ನನ್ನು ಮನೆಗೆ ಕರೆದುಕೊಂಡು ಬಂದಿದ್ದರು. ಗಂಭೀರವಾಗಿ ಹಲ್ಲೆಗೊಳಗಾದ ಹಿನ್ನೆಲೆಯಲ್ಲಿ ರಂಜಿತ್ ಎದ್ದೇಳಲಾಗದ ಸ್ಥಿತಿ ತಲುಪಿದ್ದು, ತಕ್ಷಣವೇ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಸ್ಕ್ಯಾನಿಂಗ್ ಹಾಗೂ ಹೆಚ್ಚಿನ ಚಿಕಿತ್ಸೆಯ ಹಿನ್ನೆಲೆಯಲ್ಲಿ ಅವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Also Read : ಮದ್ಯಪಾನ ಮಾಡಿ ಗಲಾಟೆ, ಪೊಲೀಸರ ಮೇಲೆಯೇ ಹಲ್ಲೆ.. ಇಬ್ಬರು ಯುವಕರ ಬಂಧನ
ಗಾಯಾಳು ರಂಜಿತ್ ಹಾಗೂ ಆರೋಪಿಗಳ ನಡುವೆ ಇದ್ದ ಹಳೆಯ ವೈಷಮ್ಯವೇ ಈ ಭೀಕರ ಹಲ್ಲೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಈ ಕುರಿತು ರಾಘವೇಂದ್ರ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
kundapura crime news Ranjith attacked with soda bottle helmet in kumbhashi Kannada News



