ಉಡುಪಿ ಶ್ರೀಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ : ಎರಡೂವರೆ ಕೋಟಿ ಮೌಲ್ಯದ ಗ್ರಂಥದ ಲೋಕಾರ್ಪಣೆ ಯಾವಾಗ
ಚಿನ್ನದ ದರ ಏರಿಕೆ ನಾಗಾಲೋಟದಿಂದ ಸಾಗುತ್ತಿದ್ದ ಒಂದು ಗ್ರಾಂ ಚಿನ್ನದ ದರ ಗಗನ ಮುಟ್ಟಿದೆ. ಒಂದು ಗ್ರಾಂ ಹಳದಿಯ ಲೋಹದ ದರ 13 ಸಾವಿರ ರೂಪಾಯಿ ತಲುಪುತ್ತಿರುವ ಬೆನ್ನಲ್ಲೇ ಉಡುಪಿಯ ಶ್ರೀ ಕೃಷ್ಣನಿಗೆ ಭಕ್ತರೊಬ್ಬರಿಂದ ಚಿನ್ನದ ಹಾಳೆಯಲ್ಲಿ ಬರೆಯಲಾದ ಭಗವದ್ಗೀತೆ ಗ್ರಂಥ ಅರ್ಪಣೆಯಾಗಿದೆ.
ಈ ಭಗವದ್ಗೀತೆ ಗ್ರಂಥ ಸಂಪೂರ್ಣ ಚಿನ್ನದ ಹಾಳೆಯಿಂದ ಮಾಡಲ್ಪಿಟ್ಟು ಇದರ ಮೇಲೆ ಶ್ಲೋಕಗಳನ್ನು ಬರೆಯಲಾಗಿದೆ. ಜನವರಿ 8ರಂದು ಶ್ರೀಕೃಷ್ಣನ ಸನ್ನಿಧಿಯಲ್ಲಿ ಈ ದುಬಾರಿ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಶ್ರೀಕೃಷ್ಣನ ಭಕ್ತರೊಬ್ಬರು ನೀಡಿದ ಕಾಣಿಕೆ ಇದಾಗಿದ್ದು ಬರೋಬ್ಬರಿ ಎರಡೂವರೆ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಈ ಬಂಗಾರದ ಭಗವದ್ಗೀತೆ ಗ್ರಂಥವನ್ನು ತಯಾರಿಸಲಾಗಿದೆ. 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಯ ಮೇಲೆ ಮುದ್ರಿಸಲಾಗಿದೆ.
ಇದನ್ನೂ ಓದಿ: ಕರಾವಳಿ ಭಾಗದ ಜನತೆಗೆ ಗುಡ್ನ್ಯೂಸ್.. ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ಪ್ರೆಸ್
ಚಿನ್ನದ ರಥದಲ್ಲಿ ಭಗವದ್ಗೀತೆ ಮೆರವಣಿಗೆ ನಡೆಯಲಿದ್ದು, ಜನವರಿ 8, 2026 ರಂದು ಸಂಜೆ 5 ಗಂಟೆಗೆ ರಾಜಾಂಗಣದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟೆಸ್ಟ್ ಪ್ರಧಾನ ಕಾರ್ಯದರ್ಶಿ, ಚಂಪತ್ ರಾಯ್ ಸಹಿತ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ವಿಶ್ವ ಗೀತಾ ಪರ್ಯಾಯದ ಭಾಗವಾಗಿ ಭಗವದ್ಗೀತೆಯ ಸಂದೇಶವನ್ನು ಎಲ್ಲರಿಗೂ ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.



