ಗುಂಡ್ಲುಪೇಟೆ ಕಲ್ಲಹಳ್ಳಿಯಲ್ಲಿ ಹುಲಿ, 3 ಮರಿ ರಕ್ಷಣೆ: ಈಶ್ವರ ಖಂಡ್ರೆ
ಬೆಂಗಳೂರು: ಕಾಡಿನಿಂದ ಹೊರಬಂದು ಜಾನುವಾರಗಳ ಮೇಲೆ ದಾಳಿ ಮಾಡುತ್ತಿತ್ತು ಎನ್ನಲಾದ 5 ವರ್ಷದ ಹೆಣ್ಣು ಹುಲಿ ಹಾಗೂ ಅದರ 3 ಮರಿಗಳನ್ನು ಸೆರೆ ಹಿಡಿದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಲ್ಲಹಳ್ಳಿ ಬಳಿ ಮೂರು ಮರಿಗಳ ರಕ್ಷಣೆಯೊಂದಿಗೆ ಸೆರೆ ಹಿಡಿಯಲಾಗಿರುವ ಈ ಹೆಣ್ಣು ಹುಲಿ ವಸತಿ ಪ್ರದೇಶಗಳಿಗೆ ಬಂದು ಹಲವು ಜಾನುವಾರಗಳ ಮೇಲೆ ದಾಳಿ ಮಾಡಿತ್ತು ಎಂಬುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಸಚಿವರು ವಿವರಿಸಿದರು.
ಪ್ರಸ್ತುತ ಸೆರೆ ಹಿಡಿಯಲಾದ ಹೆಣ್ಣು ಹುಲಿ ಮತ್ತು ರಕ್ಷಿಸಲಾದ ಮೂರು ಮರಿಗಳು ಪಶುವೈದ್ಯರ ನಿಗಾದಲ್ಲಿವೆ. ಕಾಡಿನ ಹೊರಗೆ ಸಂಚರಿಸುತ್ತಿರುವ ಹುಲಿಗಳ ಕಾರ್ಯಾಚರಣೆ ಮುಂದುವರಿದಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಇತ್ತೀಚೆಗೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವಸತಿ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಂಡು ಜನ, ಜಾನುವಾರುಗಳ ಮೇಲೆ ಪದೇಪದೇ ದಾಳಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಂತಹ ಹುಲಿಗಳನ್ನು ಗುರುತಿಸಿ ಸೆರೆ ಹಿಡಿಯಲು ಆದೇಶ ನೀಡಲಾಗಿತ್ತು.
ಇದನ್ನೂ ಓದಿ: Sandgrouse : ನೀರಿಲ್ಲದ ಸ್ಥಳದಲ್ಲಿ ವಾಸಿಸುವ ಈ ಹಕ್ಕಿಯ ವಿಶೇಷತೆ ಏನು ಗೊತ್ತಾ?



