ಮಸಾಲಾ ಪದಾರ್ಥಗಳ ಸೇವನೆಯಿಂದ ಮಾತ್ರ ಎಸಿಡಿಟಿ ಬರತ್ತಾ ? ತಜ್ಞರು ಹೇಳಿದ ಕಾರಣ ಮತ್ತು ಪರಿಹಾರ ತಿಳಿಯಿರಿ
ಹೊಟ್ಟೆಯ ಆಮ್ಲ ಅನ್ನನಾಳಕ್ಕೆ ಬಂದಾಗ, ಅದು ಎದೆ ಮತ್ತು ಗಂಟಲಿನಲ್ಲಿ ಉರಿಯುವಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಮಾರಣಾಂತಿಕ ಕಾಯಿಲೆಯಲ್ಲವಾದರೂ ಪದೇ ಪದೇ ಸಂಭವಿಸಿದಾಗ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಎಸಿಡಿಟಿ ಇದು ಇಂದಿನ ದಿನಗಳಲ್ಲಿ ಬಹುತೇಕ ಎಲ್ಲರು ಎದುರಿಸುತ್ತಿರುವ ಅತಿ ಸಾಮಾನ್ಯ ಜೀರ್ಣಕಾರಿ ಸಮಸ್ಯೆ. ಹೊಟ್ಟೆಯ ಆಮ್ಲ ಅನ್ನನಾಳಕ್ಕೆ ಬಂದಾಗ, ಅದು ಎದೆ ಮತ್ತು ಗಂಟಲಿನಲ್ಲಿ ಉರಿಯುವಂತಹ ಲಕ್ಷಣಗಳನ್ನು ಉಂಟುಮಾಡುತ್ತದೆ. ಇದು ಮಾರಣಾಂತಿಕ ಕಾಯಿಲೆಯಲ್ಲವಾದರೂ ಪದೇ ಪದೇ ಸಂಭವಿಸಿದಾಗ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದೆಷ್ಟೇ ಔಷಧಿಗಳನ್ನು ಮಾಡಿದರೂ ಕೆಲವೊಮ್ಮೆ ಎಸಿಡಿಟಿಯಿಂದ ಬಳಲುವುದು ತಪ್ಪುವುದಿಲ್ಲ. ಇದಕ್ಕೆ ಜೀವನಶೈಲಿ ಹಾಗೂ ಆಹಾರದಲ್ಲಿ ಬದಲಾವಣೆಯೊಂದಿಗೆ ಈ ಸಮಸ್ಯೆಯಿಂದ ಹೊರಬರಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅದರ ಜೊತೆಗೆ ಕೆಲವು ಸಲಹೆಗಳನ್ನು ಅವರು ನೀಡುತ್ತಾರೆ. ಹಾಗಾದರೆ ಎಸಿಡಿಟಿ ಸಮಸ್ಯೆಯಿಂದ ಹೊರಬರಲು ಇರುವ ಉಪಾಯಗಳೇನು? ಎಂದು ನೋಡೋಣ.
ಎಸಿಡಿಟಿಗೆ ಕಾರಣವೇನು?
ಎಸಿಡಿಟಿಗೆ ಮಸಾಲೆಯುಕ್ತ ಆಹಾರಗಳು ಮಾತ್ರ ಕಾರಣ ಎಂದು ಹಲವರು ನಂಬುತ್ತಾರೆ. ಆದರೆ ಅದು ಸಂಪೂರ್ಣವಾಗಿ ನಿಜವಲ್ಲ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಗಳು, ಸಕ್ಕರೆ ಅಂಶ ಹೆಚ್ಚಿರುವ ಆಹಾರಗಳು, ಕರಿದ ಪದಾರ್ಥಗಳು, ಹುಳಿ ಅಂಶ ಹೆಚ್ಚಿರುವ ಆಹಾರಗಳು, ಅತಿಯಾಗಿ ತಿನ್ನುವ ಅಭ್ಯಾಸ ಮುಂತಾದವುಗಳು ಎಸಿಡಿಟಿಯನ್ನು ಹೆಚ್ಚಿಸುತ್ತವೆ.
ಇದನ್ನೂ ಓದಿ : ಈ ಲಕ್ಷಣಗಳು ಕಂಡುಬಂದರೆ ಎಚ್ಚರ..! ಕಿಡ್ನಿ ಸ್ಟೋನ್ ಅಪಾಯದಿಂದ ಹೊರಬರಲು ಈ ಸಲಹೆ ಪಾಲಿಸಿ
ಊಟ ಮಾಡಿದ ತಕ್ಷಣ ಮಲಗಬೇಡಿ
ಊಟದ ನಂತರ ತಕ್ಷಣ ಮಲಗುವುದರಿಂದ ಹೊಟ್ಟೆಯೊಳಗಿನ ಆಮ್ಲದ ಹಿಮ್ಮುಖ ಹರಿವು ಹೆಚ್ಚಾಗುತ್ತದೆ. ಆದ್ದರಿಂದ ಮಲಗಲು ಕನಿಷ್ಠ 2 ಗಂಟೆ ಮೊದಲು ಊಟ ಮಾಡಲು ಸಲಹೆ ನೀಡುತ್ತಾರೆ. ಹಾಗೆ ಮಾಡುವುದರಿಂದ ಹೊಟ್ಟೆಯಲ್ಲಿನ ಆಮ್ಲವು ಆಹಾರವನ್ನು ಜೀರ್ಣಿಸುವ ಕಾರ್ಯವನ್ನು ಮಾಡುತ್ತದೆ. ಇದರಿಂದ ರಾತ್ರಿಯಲ್ಲಿ ಎಸಿಡಿಟಿಯಾಗುವ ಸಾಧ್ಯತೆಯು ಕಡಿಮೆಯಾಗುತ್ತದೆ. ಇನ್ನೊಂದು ಮುಖ್ಯ ಸೂಚನೆಯೆಂದರೆ ಮಲಗುವಾಗ ತಲೆಯ ಭಾಗವು ದೇಹಕ್ಕಿಂತ ಆರರಿಂದ ಎಂಟು ಇಂಚುಗಳಷ್ಟು ಎತ್ತರದಲ್ಲರುವಂತೆ ಬೆಡ್ ಅನ್ನು ಜೋಡಿಸುವುದು ಸಹ ಪ್ರಯೋಜನಕಾರಿಯಾಗಿದೆ. ಇದರಿಂದ ಆಮ್ಲದ ಹಿಮ್ಮುಖ ಹರರಿವಿನ ಸಮಸ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಊಟದ ನಂತರ ಕನಿಷ್ಠ ಹತ್ತು ನಿಮಿಷಗಳ ಕಾಲ ನಡೆಯುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ಊಟದ ನಂತರ ಮಾಡುವ ಸಣ್ಣ ನಡಿಗೆ ಹೊಟ್ಟೆಯಲ್ಲಿರುವ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಮ್ಲ ಹಿಮ್ಮುಖ ಹರಿವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

