ಸಕಲೇಶಪುರ : ಆನೆ ದಾಳಿ; ಕೂಲಿ ಕಾರ್ಮಿಕ ಮಹಿಳೆ ಸಾವು
ಬೆಳ್ಳಂ ಬೆಳಗ್ಗೆ ನಡೆದ ಕಾಡಾನೆ ದಾಳಿಯಲ್ಲಿ ಓರ್ವ ಕೂಲಿ ಕಾರ್ಮಿಕ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಮೂಗಲಿ ಗ್ರಾಮದ 40 ವರ್ಷದ ಶೋಭಾ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಶೋಭಾ ಒಂದೂವರೆ ಎಕರೆ ತೋಟ ಹೊಂದಿದ್ದು ತಮ್ಮ ತಾಯಿ ಬೆಳಗೋಡು ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜಮ್ಮ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಕಾಡಾನೆ ಶೋಭಾರನ್ನು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಹೇಗೋ ರಾಜಮ್ಮ ಆನೆಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಶೋಭಾ ಕಾಡಾನೆಯ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಸಕಲೇಶಪುರ ಭಾಗದಲ್ಲಿ ಪದೇ ಪದೇ ಕಾಡಾನೆ ದಾಳಿ ಸಂಭವಿಸುತ್ತಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.



