ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಇಂತಹ ರೈತರಿಗೆ ಸಿಗಲ್ಲ! ಹೊಸ ಪಟ್ಟಿ
ಪಿಎಂ ಕಿಸಾನ್ ಯೋಜನೆಯ 23ನೇ ಕಂತಿನ ಹಣ ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ದಾಖಲೆಗಳ ಪರಿಶೀಲನೆ ಬಳಿಕ ಅನರ್ಹರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ.

ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ಸಹಾಯ ಪಡೆಯುತ್ತಿರುವ ರೈತರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮಹತ್ವದ ಸೂಚನೆ ನೀಡಿದೆ. ಮುಂದಿನ 23ನೇ ಕಂತಿನ ಹಣ ಖಾತೆಗೆ ಬರಬೇಕಾದರೆ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದರು. ಈಗ ರೈತರು ಮುಂದಿನ ಕಂತಿನ ನಿರೀಕ್ಷೆಯಲ್ಲಿದ್ದು, ಜೂನ್ ಅಥವಾ ಜುಲೈ ವೇಳೆಗೆ 23ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ದಾಖಲೆ ಪರಿಶೀಲನೆ ಪ್ರಕ್ರಿಯೆ ಕಠಿಣಗೊಳಿಸಿರುವ ಕೇಂದ್ರ ಸರ್ಕಾರ, ಅಗತ್ಯ ಮಾಹಿತಿಯನ್ನು ನವೀಕರಿಸದವರ ಖಾತೆಗೆ ಹಣ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದೆ.
ಡಿಬಿಟಿ (Direct Benefit Transfer) ಮೂಲಕ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ, ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಬೇಕು. ಜೊತೆಗೆ ಮೊಬೈಲ್ ಸಂಖ್ಯೆಯನ್ನು ಕೂಡ ನವೀಕರಿಸಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇ-ಕೆವೈಸಿ ಪೂರ್ಣಗೊಳಿಸಲು ರೈತರಿಗೆ ಮೂರು ವಿಧಾನಗಳ ಸೌಲಭ್ಯ ನೀಡಲಾಗಿದೆ. ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಮೂಲಕ ಸ್ವತಃ ಪ್ರಕ್ರಿಯೆ ಮುಗಿಸಬಹುದು. ಮೊಬೈಲ್ ಆಪ್ ಮೂಲಕವೂ ಇ-ಕೆವೈಸಿ ಮಾಡಬಹುದಾಗಿದೆ. ಇಲ್ಲವಾದರೆ ಸಮೀಪದ ಕಾಮನ್ ಸರ್ವಿಸ್ ಸೆಂಟರ್ಗೆ ಭೇಟಿ ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಇದೇ ವೇಳೆ ಅನರ್ಹ ಫಲಾನುಭವಿಗಳ ವಿರುದ್ಧವೂ ಕೇಂದ್ರ ಸರ್ಕಾರ ಕ್ರಮ ಮುಂದುವರಿಸಿದೆ. 2019ರ ಫೆಬ್ರವರಿ 1 ನಂತರ ಕೃಷಿ ಭೂಮಿ ಖರೀದಿಸಿದವರಿಗೆ ಯೋಜನೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜೊತೆಗೆ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಯೋಜನೆಯ ಸೌಲಭ್ಯ ಸಿಗುತ್ತದೆ.
ಆದಾಯ ತೆರಿಗೆ ಪಾವತಿಸುವ ಕೆಲವರು ಕೂಡ ಪಿಎಂ ಕಿಸಾನ್ ಲಾಭ ಪಡೆಯುತ್ತಿರುವುದು ಪತ್ತೆಯಾಗಿದ್ದು, ಐಟಿ ಇಲಾಖೆಯ ಮಾಹಿತಿಯ ಆಧಾರದಲ್ಲಿ ಅಂತಹವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಮರುಪರಿಶೀಲನೆ ಪ್ರಕ್ರಿಯೆಯಿಂದ ಪ್ರತಿ ವರ್ಷ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ರೈತರು ಯಾವುದೇ ವಿಳಂಬ ಮಾಡದೇ ಇ-ಕೆವೈಸಿ ಪೂರ್ಣಗೊಳಿಸಿ ದಾಖಲೆಗಳನ್ನು ಸರಿಪಡಿಸಿಕೊಂಡರೆ ಮಾತ್ರ ಮುಂದಿನ ಕಂತಿನ ಹಣ ಸಮಯಕ್ಕೆ ಸರಿಯಾಗಿ ಖಾತೆಗೆ ಜಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



