ಮದುವೆ ಮನೆ ಮೇಲೆ ಗುಂಡು ಹಾರಿಸಿದ ಭಗ್ನ ಪ್ರೇಮಿ ..! ಅಷ್ಟಕ್ಕೂ ನಡೆದಿದ್ದೇನು ಗೊತ್ತಾ ?

ಕಾರವಾರ : ಮದುವೆ ಮನೆಯಲ್ಲಿ ಮಧುಮಗಳು ತಂಗಿದ್ದ ಕೋಣೆಗೆ ಭಗ್ನ ಪ್ರೇಮಿಯೋರ್ವ ಗುಂಡು ಹಾರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆವರ್ಸಾದಲ್ಲಿ ನಡೆದಿದೆ.

ಆವರ್ಸಾದ ಸಭಾಭವನವೊಂದರಲ್ಲಿ ದಿವ್ಯಾ ಹಾಗೂ ಪ್ರಕಾಶ್ ಅವರ ವಿವಾಹ ನಿಗದಿಯಾಗಿತ್ತು. ಈ ವೇಳೆಯಲ್ಲಿ ಮದುಮಗಳು ತಂಗಿದ್ದ ಕೊಠಡಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.ಗುಂಡೇಟಿನ ಹೊಡೆತಕ್ಕೆ ಗೋಡೆ ಹಾಗೂ ಕಿಟಕಿಯಲ್ಲಿ ರಂಧ್ರ ಉಂಟಾಗಿದೆ. ಇದರಿಂದ ಗಲಿಬಿಲಿ ಗೊಂಡ ಮದುವೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಿಗಿ ಭದ್ರತೆಯ ನಡುವಲ್ಲೇ ಮದುವೆಯನ್ನು ಮಾಡಿ ಮುಗಿಸಿದ್ದಾರೆ.

ಅಷ್ಟಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ ..?
ಮದುಮಗಳು ಸುಂಕಸಾಳದಲ್ಲಿ ಕಾಲೇಜು ಓದುತ್ತಿದ್ದ ವೇಳೆಯಲ್ಲಿ ರಾಜೇಶ್ ಗಣಪತಿ ಗಾಂವಕಾರ್ ಎಂಬ ರೌಡಿಶೀಟರ್ ಬೆನ್ನು ಬಿದ್ದಿದ್ದ. ಆದರೆ ದಿವ್ಯಾ ರಾಜೇಶ್ ಪ್ರೀತಿಗೆ ಸೊಪ್ಪು ಹಾಕಿರಲಿಲ್ಲ. ನಂತರದಲ್ಲಿ ಬಿಎಡ್ ಪಡವಿಯನ್ನು ಪೂರೈಸಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಪ್ರಕಾಶ್ ಎಂಬ ಯುವಕನನ್ನು ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆಯಾಗೋದಕ್ಕೆ ಸಿದ್ದರಾಗಿದ್ದರು.

ಇದು ರಾಜೇಶ್ ನನ್ನು ಕೆರಳುವಂತೆ ಮಾಡಿತ್ತು. ಅಲ್ಲದೇ ಹಲವು ಬಾರಿ ತನ್ನನ್ನು ಮದುವೆಯಾಗುವಂತೆಯೂ ರಾಜೇಶ್ ಒತ್ತಡವನ್ನು ಹೇರಿದ್ದಾನೆ. ಆದರೆ ದಿವ್ಯಾ ಇದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಇದೇ ಕಾರಣಕ್ಕೆ ಮದುವೆಯ ದಿನ ಮದುಮಗಳು ತಂಗಿದ್ದ ಕೊಠಡಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಪಟಾಕಿಯ ಸದ್ದು ಎಂದು ಮನೆಯಿಂದ ಹೊರ ಬಂದು ನೋಡಿದಾಗ ರಾಜೇಶ್ ಗುಂಡು ಹಾರಿಸುತ್ತಿದ್ದ. ನಂತರದಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ ಅಂತಾ ವಧುವಿನ ಸಂಬಂಧಿಕರು ಆರೋಪಿಸಿದ್ದಾರೆ.

ರಾಜೇಶ್ ಈ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆಯೂ ಗುಂಡು ಹಾರಿಸಿದ್ದ. ಅಲ್ಲದೇ ಈತನ ವಿರುದ್ದ ಹಲವು ಪ್ರಕರಣಗಳು ದಾಖಲಾಗಿವೆ. ಇದೀಗ ವಧುವಿನ ಮನೆಯ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆಯ ಪೊಲಿಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.