ಉಡುಪಿ: ಕೊಡೇರಿಯಲ್ಲಿ ನಡೆದಿದ್ದ ನಾಡದೋಣಿ ದುರಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ನಾಲ್ವರು ಮೀನುಗಾರರ ಪೈಕಿ ಓರ್ವ ಮೀನುಗಾರನ ಶವ ಪತ್ತೆಯಾಗಿದ್ದು, ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಕೊಡೇರಿ ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ದೋಣಿ ಬಂಡೆಗೆ ಬಡಿದು ನಾಲ್ವರು ಮೀನುಗಾರರು ಮೃತಪಟ್ಟಿದ್ದರು. ಇದೀಗ ದುರಂತ ನಡೆದ ಕೊಡೇರಿಯಿಂದ ಸ್ವಲ್ಪ ದೂರದಲ್ಲಿರುವ ನಾಗೂರಿನ ಸಮುದ್ರ ಕಿನಾರೆಯಲ್ಲಿ ನಾಗರಾಜ ಖಾರ್ವಿ (55 ವರ್ಷ) ಅವರ ಮೃತದೇಹ ಪತ್ತೆಯಾಗಿದೆ.
ನಿನ್ನೆ ಸಂಜೆಯವರೆಗೂ ಕರಾವಳಿ ಕಾವಲು ಪಡೆ ಹಾಗೂ ಪೊಲೀಸರು ಸ್ಥಳೀಯ ಮೀನುಗಾರರ ನೆರವಿನೊಂದಿಗೆ ನಾಪತ್ತೆಯಾದವರಿಗಾಗಿ ಸಮುದ್ರದಲ್ಲಿ ಕಾರ್ಯಾಚರಣೆಯನ್ನು ನಡೆಸಿದ್ದರು. ಆದರೆ ಕತ್ತಲಾಗಿದ್ದರಿಂದ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಇದೀಗ ನಾಗರಾಜ ಖಾರ್ವಿ ಅವರ ಮೃತದೇಹ ಪತ್ತೆಯಾಗಿದ್ದು, ಮಂಜುನಾಥ ಖಾರ್ವಿ, ಶೇಖರ ಖಾರ್ವಿ ಹಾಗೂ ಲಕ್ಷ್ಮಣ ಖಾರ್ವಿ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಉಳಿದಂತೆ ದುಂತರದಲ್ಲಿ ಸತೀಶ್, ಮಹಾಬಲ, ಜನಾರ್ದನ್, ನಿತ್ಯಾನಂದ, ಅಣ್ಣಪ್ಪ, ಚಂದ್ರ, ವೆಂಕಟರಮಣ್ ಹಾಗೂ ಚಂದ್ರಶೇಖರ್ ಅವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.