ಸಿಡಿ ಬ್ಲಾಸ್ಟ್ : ನಾನಲ್ಲ, ನಾನಲ್ಲ ಅನ್ನುತ್ತಲೇ ದೆಹಲಿಗೆ ಹಾರಿದ ಜಾರಕಿಹೊಳಿ

ಬೆಂಗಳೂರು : ಉದ್ಯೊಗಕ್ಕಾಗಿ ಮಹಿಳೆಯೋರ್ವರಿಗೆ ಆಮಿಷವೊಡ್ಡಿ ರಾಸಲೀಲೆ ನಡೆಸಿರುವ ವಿಡಿಯೋ ಬಹಿರಂಗವಾಗುತ್ತಿದ್ದಂತೆಯೇ ಸಚಿವ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರೋದು ನಾನಲ್ಲ, ನಾನಲ್ಲ ಎನ್ನುತ್ತಿದ್ದಾರೆ. ಆದರೆ ಸದ್ದಿಲ್ಲದೇ ಸಾಹುಕಾರ್ ದೆಹಲಿಗೆ ಹಾರಿದ್ದಾರೆ.


ದೆಹಲಿಯ ಕರ್ನಾಟಕದ ಭವನದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಜಾರಕಿಹೊಳಿ ಪಲ್ಲಂಗ ವಿಡಿಯೋ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಸಿಡಿ ಬಯಲಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಮುಜುಗರಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆನ್ನುವ ಕಾರಣಕ್ಕೆ ಎಂತಹಾ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡೆವು ಎಂದು ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ.

ರಾಸಲೀಲೆಯ ಸಿಡಿ ಬಯಲಾಗುತ್ತಿದ್ದಂತೆಯೇ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿರುವ ಸಚಿವ ಜಾರಕಿಹೊಳಿ, ವಿಡಿಯೋದಲ್ಲಿರೋದು ನಾನಲ್ಲ, ನಾನಲ್ಲ ಅನ್ನುತ್ತಿದ್ದಾರೆ. ನಮ್ಮ ಮನೆತನ ದೊಡ್ಡ ಮನೆತನ, ರಾಜಕೀಯ ನಮಗೆ ದೊಡ್ಡದಲ್ಲ, ಮನೆತನದ ಮರ್ಯಾದೆ ಮುಖ್ಯ. ಹೀಗಾಗಿ ಅದು ನನ್ನ ವಿಡಿಯೋ ಅಲ್ಲ, ಆ ಹುಡುಗಿ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಇನ್ನೊಂದೆಡೆ ಬಿಜೆಪಿ ಪಕ್ಷ ಹಾಗೂ ಹೈಕಮಾಂಡ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಅನ್ನೋ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ಸದ್ದಿಲ್ಲದೇ ದೆಹಲಿಗೆ ಹಾರಿದ್ದಾರೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ, ಹೀಗಾಗಿ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಮಾತನಾಡಿ ಸೂಕ್ತ ತನಿಖೆಗೆ ನಾನು ಒತ್ತಾಯಿಸುತ್ತೇನೆ. ಜೊತೆಗೆ ಈಗಾಗಲೇ ವಕೀಲರ ಜೊತೆಗೆ ಮಾತುಕತೆ ಮಾಡಿದ್ದು ಸೂಕ್ತ ಕಾನೂನು ಕ್ರಮದ ಬಗ್ಗೆಯೂ ನಿರ್ಧರಿಸುತ್ತೇನೆ ಅಂದಿದ್ದಾರೆ.

Comments are closed.