ಚಿಕ್ಕಮಗಳೂರು : ಕಾಫಿಡೇ ಸಿದ್ದಾರ್ಥ್ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ರಿ ಮಾಳವಿಕ ಸಿದ್ದಾರ್ಥ್ ಇದೀ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿ ಬೆಳೆಗಾರರಿಗೆ ನೂರಾರು ಕೋಟಿ ರೂಪಾಯಿ ಹಣ ನೀಡದ ಆರೋಪದ ಹಿನ್ನೆಲೆಯಲ್ಲೀಗ ಬಂಧನದ ಭೀತಿ ಎದುರಾಗಿದೆ.
ಕಳೆದೊಂದು ವರ್ಷದ ಹಿಂದೆಷ್ಟೇ ಕಾಫಿಡೇ ಸಂಸ್ಥಾಪಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಸಿದ್ದಾರ್ಥ್ ಸಾವಿನ ಬೆನ್ನಲ್ಲೇ ಕಾಫಿಡೇ ಸಂಸ್ಥೆಯ ಹೊಣೆಯನ್ನು ಮಾಳವಿಕ ಸಿದ್ದಾರ್ಥ್ ವಹಿಸಿಕೊಂಡಿದ್ದರು. ಸಿದ್ದಾರ್ಥ್ ಒಡೆತನದ ಎಬಿಸಿ ಸಂಸ್ಥೆ ಕಳೆದ ಕೆಲ ವರ್ಷಗಳಿಂದಲೂ ಕಾಫಿ ಬೆಳೆಯನ್ನು ನೀಡಿದ್ದ ರೈತರಿಗೆ ಹಣವನ್ನು ಪಾವತಿ ಮಾಡಿರಲಿಲ್ಲ.
ಚಿಕ್ಕಮಗಳೂರು ಜಿಲ್ಲೆಯ ಸುಮಾರು 300 ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣವನ್ನು ಪಾವತಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯ ಕಾಫಿ ಬೆಳೆಗಾರ ನಂದೀಶ್ ಕೆ.ಎಂಬವರು ಚೆನ್ ಬೌನ್ಸ್ ಕೇಸ್ ದಾಖಲು ಮಾಡಿದ್ದರು. ಪ್ರಕರಣದ ಕುರಿತು ವಿಚಾರಣೆಯನ್ನು ನಡೆಸಿರುವ ಮೂಡಿಗೆರೆಯ ಜೆಎಂಎಫ್ ಸಿ ನ್ಯಾಯಾಲಯ ಇದೀಗ ಮಾಳವಿಕ ಸಿದ್ದಾರ್ಥ್ ಸೇರಿದಂತೆ ಎಬಿಸಿ ಕಂಪೆನಿಯ ಒಟ್ಟು 8 ಜನರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಬಿಸಿ ಕಂಪೆನಿ ಆರಂಭವಾದ ನಂತರದಲ್ಲಿ ಜಿಲ್ಲೆಯ ಬಹುತೇಕ ಬೆಳೆಗಾರರು ಕಾಫಿಯನ್ನು ಮಾರಾಟ ಮಾಡುತ್ತಿದ್ದರು. ಆರಂಭದಲ್ಲಿ ರೈತರಿಗೆ ಸಕಾಲದಲ್ಲಿಯೇ ಹಣವನ್ನು ಪಾವತಿ ಮಾಡುತ್ತಿದ್ದ ಕಂಪೆನಿ ಇತ್ತೀಚಿನ ಕೆಲ ವರ್ಷಗಳಿಂದಲೂ ಹಣವನ್ನು ಬಾಕಿ ಉಳಿಸಿಕೊಂಡಿದೆ. ಅದ್ರಲ್ಲೂ ಸಿದ್ದಾರ್ಥ್ ಸಾವಿನ ನಂತರದಲ್ಲಿ ರೈತರಿಗೆ ಹಣವನ್ನು ಪಾವತಿ ಮಾಡಿಲ್ಲ. ಇದು ಕಾಫಿ ಬೆಳೆಗಾರರನ್ನು ಕೆರಳಿಸಿದೆ.
ಸಿದ್ದಾರ್ಥ್ ಸಾವಿನ ಬೆನ್ನಲ್ಲೇ ಎಬಿಸಿಯ ಹಲವು ಶಾಖೆಗಳನ್ನು ಮುಚ್ಚಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಸಿದ್ದಾರ್ಥ್ ಒಡೆತನದ ಕಾಫಿ ತೋಟಗಳನ್ನು ಕೂಡ ಮಾರಾಟ ಮಾಡಲಾಗಿದೆ. ಇದೀಗ ಬೆಳೆಗಾರರು ಎಬಿಸಿ ವಿರುದ್ದ ಕಾನೂನು ಸಮರಕ್ಕೆ ಮುಂದಾಗಿರೋದು ಮಾಳವಿಕಾ ಸಿದ್ದಾರ್ಥ್ ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ.
ಅಲ್ಲದೇ ಎಬಿಸಿ ಕಂಪೆನಿಯ ಸಿಬ್ಬಂದಿಗಳ ಜೊತೆಗೆ ಕಾಫಿ ಖರೀದಿ ಮಾಡಿದವರನ್ನೂ ಕೂಡ ಪಾರ್ಟಿಯನ್ನಾಗಿ ಮಾಡಲಾಗಿದೆ. ಜಾಮೀನು ರಹಿತ ವಾರೆಂಟ್ ಜಾರಿ ಮಾಡಿರೋದು ಇದೀಗ ಮಾಳವಿಕ ಸಿದ್ದಾರ್ಥ್ ಗೆ ಸಂಕಷ್ಟವನ್ನು ತಂದೊಡ್ಡಿದೆ.
Comments are closed.