ಮಂಗಳೂರು / ಮಡಿಕೇರಿ : ಕರಾವಳಿ ಮತ್ತು ಮಲೆನಾಡಿನ ಭಾಗಗಳಲ್ಲಿ ಸೊರಗಿರೊ ಕಾಂಗ್ರೆಸ್ ಪಕ್ಷಕ್ಕೆ ನವಚೈತನ್ಯ ನೀಡೋ ನಿಟ್ಟಿನಲ್ಲಿ ಕೆಪಿಸಿಸಿ ಮಹತ್ವ ಹೆಜ್ಜೆಯಿರಿಸಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಮನಸ್ಸು ಮಾಡಿದ್ದು, ಶೀಘ್ರದಲ್ಲಿಯೇ ಹೊಸ ಅಧ್ಯಕ್ಷರು ನೇಮಕವಾಗೋ ಸಾಧ್ಯತೆಯಿದೆ.
ವಿಧಾನ ಪರಿಷತ್ ಸದಸ್ಯರಾಗಿರೋ ಹರೀಶ್ ಕುಮಾರ್ ಕಳೆದ ಮೂರು ವರ್ಷಗಳಿಂದಲೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಚುಕ್ಕಾಣಿಯನ್ನು ಹಿಡಿದಿದ್ದರು. ಹರೀಶ್ ಕುಮಾರ್ ನೇಮಕದ ಬೆನ್ನಲ್ಲೇ ಬಂದರು ನಗರಿಯಲ್ಲಿ ಕೈ ಪಾಳ ಮೇಲುಗೈ ಸಾಧಿಸುತ್ತೇ ಅಂತಾನೇ ಬಾವಿಸಿದ್ದರು. ಆದರೆ ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ. ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಅಷ್ಟೇ ಯಾಕೆ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಹೀನಾಯ ಸೋಲನ್ನು ಕಂಡಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿದ್ದರೂ ಕೂಡ ಈಗ ಕೇವಲ 1 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಂಡಿದೆ.
ಇನ್ನು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಿಥುನ್ ರೈ ಗೆಲ್ಲುತ್ತಾರೆನ್ನುವ ನಿರೀಕ್ಷೆ ಆರಂಭದಲ್ಲಿ ಹುಟ್ಟುಹಾಕಿತ್ತು. ಆದರೆ ಚುನವಣಾ ಪ್ರಕ್ರಿಯೆ ಆರಂಭವಾಗುತ್ತಲೇ ಕಾಂಗ್ರೆಸ್ ಸೋಲು ಖಚಿತವಾಗಿತ್ತು. ಇನ್ನು ಮಹಾನಗರ ಪಾಲಿಕೆ ಚುನಾವಣೆಯಲ್ಲಿಯೂ ಟಿಕೆಟ್ ಕಿತ್ತಾಟ ಪಾಲಿಕೆಯ ಗದ್ದು ತಪ್ಪಿ ಹೋಗೋದಕ್ಕೆ ಮೊದಲ ಕಾರಣವಾಗಿತ್ತು. ಪಕ್ಷ ಸಂಘಟನೆಯ ಜೊತೆಗೆ ಪಕ್ಷದ ಹಿರಿಯ ನಾಯಕರ ಕಡೆಗಣನೆ. ಕೆಲವರು ಸ್ವಾರ್ಥಕ್ಕಾಗಿ ಪಕ್ಷವನ್ನು ಬಲಿಕೊಟ್ಟಿದ್ದು ಕೂಡ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದೆ. ಆದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಹರೀಶ್ ಕುಮಾರ್ ನಿರೀಕ್ಷಿತ ಪಟ್ಟದಲ್ಲಿ ಪಕ್ಷವನ್ನು ಸಂಘಟಿಸಿಲ್ಲ, ಪಕ್ಷದಲ್ಲಿನ ಆಂತಕರಿಕ ಕಚ್ಚಾಟವನ್ನು ನಿಲ್ಲಿಸುವಲ್ಲಿಯೂ ಕೂಡ ವಿಫಲರಾಗಿದ್ದಾರೆ. ಅನ್ನೋ ಮಾತು ಪಕ್ಷದ ವಲಯದಲ್ಲಿಯೇ ಕೇಳಿಬರುತ್ತಿದೆ.
ಈ ನಡುವಲ್ಲೇ ಕೆಪಿಸಿಸಿ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಚುನಾವಣಾ ವೀಕ್ಷಕರನ್ನು ಕರೆಯಿಸಿ ಮೌಲ್ಯಮಾಪನ ಮಾಡಿತ್ತು. ಅಲ್ಲದೇ ಜಿಲ್ಲಾಧ್ಯಕ್ಷರ ಬದಲಾವಣೆಗೆ ಮುಂದಾಗಿತ್ತು. ಆದರೆ ಈ ವೇಳೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸೋ ಸಮರ್ಥ ನಾಯಕನ ಆಯ್ಕೆಯ ಬದಲು, ಪರಸ್ಪರ ನಾಯಕರ ಕೆಸರೆರೆಚಾಟಕ್ಕೆ ಮಾತ್ರ ಸೀಮಿತವಾಗಿತ್ತು. ವೀಕ್ಷಕರ ಮುಂದೆ ಕಾಂಗ್ರೆಸ್ ನಾಯಕರು ಬೇರೊಬ್ಬರ ಬಗ್ಗೆ ದೂರು ಹೇಳಿದ್ದರೇ ವಿನಃ, ಯಾರು ಜಿಲ್ಲಾಧ್ಯಕ್ಷರಾಗಬಹುದು ಅನ್ನೋದನ್ನು ಹೇಳಿಲ್ಲ. ಹೀಗಾಗಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆಪ್ರಕ್ರಿಯೆ ವಿಳಂಭವಾಗಿತ್ತು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಿತಿಯೇ ಕೊಡಗಿನಲ್ಲಿಯೂ ಇದೆ. ಕೊಡಗು ಜಿಲ್ಲೆಯಲ್ಲಿ ಮಂಜುನಾಥ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣಾ ಕಣಕ್ಕೆ ಪಕ್ಷೇತರರಾಗಿ ಧುಮುಕಿದ್ದ ಮಂಜುನಾಥ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಮಂಜುನಾಥ ನಾಯಕತ್ವದಡಿಯಲ್ಲಿ ಪಕ್ಷ ಅಭಿವೃದ್ದಿಯಾಗುತ್ತೆ ಅನ್ನೋ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನು ಪಕ್ಷಕ್ಕೆ ಕರೆತಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಹುದ್ದೆಯನ್ನೂ ನೀಡಿತ್ತು. ವಿಧಾನಸಭೆ, ಲೋಕಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮುಗ್ಗರಿಸಿ ಬಿದ್ದಿತ್ತು. ಮಾತ್ರವಲ್ಲ ಜಿಲ್ಲಾಧ್ಯಕ್ಷರಾಗಿದ್ದ ಮಂಜುನಾಥ ಸ್ವತಃ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು ಕೂಡ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿತ್ತು.
ಈ ನಡುವಲ್ಲೇ ಜಿಲ್ಲಾಧ್ಯಕ್ಷರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗೆ ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹಿರಿಯ ಹಾಗೂ ಮೂಲ ಕಾಂಗ್ರೆಸ್ ನಾಯಕರಿಗೂ ಕೂಡ ಮಂಜುನಾಥ ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರಿಯುವುದು ಇಷ್ಟವಿಲ್ಲ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಯಲ್ಲಿಯೂ ಕೆಲ ಕಾಂಗ್ರೆಸ್ ನಾಯಕರು ಜಿಲ್ಲಾಧ್ಯಕ್ಷರ ವಿರುದ್ದ ದೂರು ನೀಡಿದ್ದರು ಎನ್ನಲಾಗುತ್ತಿದೆ.
ಆದರೆ ಸಮ್ಮಿಶ್ರ ಸರಕಾರದ ಪತನ, ಉಪ ಚುನಾವಣೆ, ಕೆಪಿಸಿಸಿ ಅಧ್ಯಕ್ಷರ ರಾಜೀನಾಮೆ, ಹೊಸ ನಾಯಕರ ಆಯ್ಕೆಗೆ ವಿಳಂಭ ಹೀಗೆ ನಾನಾ ಕಾರಣಗಳಿಂದಾಗಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ನಾಯಕನ ಆಯ್ಕೆ ವಿಳಂಭವಾಗಿತ್ತು. ಆದ್ರೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆಯ ಬೆನ್ನಲ್ಲೇ ಕೆಪಿಸಿಸಿ ಬಹುತೇಕ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಬದಲಾವಣೆ ಮಾಡೋ ಸಾಧ್ಯತೆಯಿದೆ. ಹೀಗಾಗಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೊಸ ಜಿಲ್ಲಾಧ್ಯಕ್ಷರಾಗೋದು ಖಚಿತ.