ಬೆಂಗಳೂರು : ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ನಿಟ್ಟಿನಲ್ಲಿ ವಂದೇ ಭಾರತ್ ಮಿಷನ್ನಡಿ ವಾಪಾಸ್ ಕರೆತರಲಾಗುತ್ತಿದೆ. ಇಂದೂ ಕೂಡ 2 ವಿಮಾನಗಳು ಭಾರತಕ್ಕೆ ಮರಳಲಿದ್ದು, ಕನ್ನಡಿಗರು ಮಂಗಳೂರು ಹಾಗೂ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.
ಮೊದಲ ಹಂತದ ಕಾರ್ಯಾಚರಣೆ ಈಗಾಗಲೇ ಆರಂಭವಾಗಿದ್ದು ಮೇ 13ಕ್ಕೆ ಮುಕ್ತಾಯವಾಗಲಿದೆ. ಇದರ ಭಾಗವಾಗಿಯೇ ವಿದೇಶದಲ್ಲಿರುವ ಭಾರತೀಯನ್ನು ಹೊತ್ತ ವಿಮಾನಗಳು ಸ್ವದೇಶಕ್ಕೆ ಮರಳುತ್ತಿವೆ. ಈ ಹಿಂದೆ ನಿಗದಿಯಾಗಿದ್ದಂತೆ ದುಬೈನಿಂದ ಮೇ 14ರಂದು ಬರಬೇಕಿದ್ದ ವಿಮಾನ ಎರಡು ದಿನಗಳ ಮುಂಚಿತವಾಗಿ ಆಗಮಿಸಲಿದೆ.
ಇಂದು ಸಂಜೆ 5.30ಕ್ಕೆ ದುಬೈನಿಂದ ವಿಶೇಷ ವಿಮಾನ ಮಂಗಳೂರಿಗೆ ಆಗಮಿಸಿದ್ರೆ, ಸಿಂಗಾಪುರದಿಂದ ರಾತ್ರಿ 9 ಗಂಟೆಗೆ ಇನ್ನೊಂದು ವಿಮಾನ ಬೆಂಗಳೂರಿಗೆ ಬರಲಿದೆ. ಅಹಮದಾಬಾದ್, ಹೈದರಾಬಾದ್, ಮುಂಬೈ, ದೆಹಲಿ, ಶ್ರೀನಗರ, ಕೊಚ್ಚಿ, ಚೆನ್ನೈ, ಕಣ್ಣೂರು ವಿಮಾನ ನಿಲ್ದಾಣಗಳಿಗೆ ಈಗಾಗಲೇ ವಿದೇಶದಲ್ಲಿರುವ ಭಾರತೀಯರು ಬಂದಿಳಿಯಲಿದ್ದಾರೆ.
ಈಗಾಗಲೇ ಇಂಗ್ಲೆಂಡ್ನಿಂದ 250 ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಅವರಿಗೆ ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್ಗಳನ್ನು ಬುಕ್ ಮಾಡಲಾಗಿದೆ. ಮೇ 13ಕ್ಕೆ ವಂದೇ ಭಾರತ್ ಮಿಷನ್ನ ಮೊದಲ ಹಂತ ಮುಕ್ತಾಯವಾಗಲಿದೆ. ಮೇ 15ರಿಂದ 2ನೇ ಹಂತದ ಕಾರ್ಯಾಚರಣೆ ಆರಂಭವಾಗಲಿದೆ.