ಶತಮಾನದ ಶಾಲೆ ಉಳಿಸಿದ ಉದ್ಯಮಿ ಜಯಪ್ರಕಾಶ್ ಶೆಟ್ಟಿ : ಸರಕಾರಿ ಶಾಲೆಗೆ 20 ಲಕ್ಷ ದೇಣಿಗೆ
ಕುಂದಾಪುರ : ಸರಕಾರಿ ಶಾಲೆಗಳ ಬಗ್ಗೆ ಸರಕಾರಕ್ಕೆ ತಾತ್ಸಾರ. ಇದೇ ಕಾರಣದಿಂದಲೇ ಅದೇಷ್ಟೋ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಂದು ಬಾಗಿಲು ಮುಚ್ಚಿದೆ. ಇಲ್ಲೊಂದು ಶಾಲೆ ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿತ್ತು. ಆದರೆ ಶತಮಾನ ಕಂಡ ಶಾಲೆಗೆ 20 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಉದ್ಯಮಿ, ಶ್ರೀ ಕೃಷ್ಣಕೃಪಾ ಕ್ಯಾಶ್ಯೂ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮುಖ್ಯಸ್ಥರಾದ ಜಯಪ್ರಕಾಶ್ ಶೆಟ್ಟಿ ಅವರು ಆಸರೆಯಾಗಿದ್ದಾರೆ.

ಕುಂದಾಪುರ : ಸರಕಾರಿ ಶಾಲೆಗಳ ಬಗ್ಗೆ ಸರಕಾರಕ್ಕೆ ತಾತ್ಸಾರ. ಇದೇ ಕಾರಣದಿಂದಲೇ ಅದೇಷ್ಟೋ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಂದು ಬಾಗಿಲು ಮುಚ್ಚಿದೆ. ಇಲ್ಲೊಂದು ಶಾಲೆ ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿತ್ತು. ಆದರೆ ಶತಮಾನ ಕಂಡ ಶಾಲೆಗೆ 20 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಉದ್ಯಮಿ, ಶ್ರೀ ಕೃಷ್ಣಕೃಪಾ ಕ್ಯಾಶ್ಯೂ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮುಖ್ಯಸ್ಥರಾದ ಜಯಪ್ರಕಾಶ್ ಶೆಟ್ಟಿ ಅವರು ಆಸರೆಯಾಗಿದ್ದಾರೆ.

ಹೈಟೆಕ್ ವ್ಯವಸ್ಥೆ, ಆಂಗ್ಲ ಮಾಧ್ಯಮದ ವ್ಯಾಮೋಹದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿರುವ ಸರಕಾರಿ ಶಾಲೆಗಳಿಗೆ ಇದು ದೊಡ್ಡ ಮಟ್ಟದ ಹೊಡೆತವನ್ನು ನೀಡುತ್ತಿದೆ. ಅಂತೆಯೇ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಂದ್ರೋಳ್ಳಿ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕಳ ಕೊರತೆಯನ್ನು ಎದುರಿಸಿತ್ತು.
ಶತಮಾನೋತ್ಸವವನ್ನು ಆಚರಿಸಿದ್ದ ಶಾಲೆ ಬಾಗಿಲು ಮುಚ್ಚಬಾರದು ಅನ್ನೋ ಕಾರಣಕ್ಕೆ ಜಪ್ತಿಯ ಇಂಡಸ್ಟ್ರಿಯ ಮಾಲೀಕರಾಗಿರುವ, ಉದ್ಯಮಿ ನಂದ್ರೋಳ್ಳಿಯ ಜಯಪ್ರಕಾಶ್ ಶೆಟ್ಟಿ ಅವರು 20 ಲಕ್ಷ ರೂ ದೇಣಿಗೆ ನೀಡುವ ಮೂಲಕ ಆಸರೆಯಾಗಿದ್ದಾರೆ.

ತಾವು ಹುಟ್ಟಿ ಬೆಳೆದ ಮನೆಯನ್ನು ಉಳಿಸುವಂತೆ, ತಾವು ಓದಿದ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪಣತೊಡಬೇಕು. ಆ ನಿಟ್ಟಿನಲ್ಲಿ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಮತ್ತು ಅವರ ಇಡೀ ಕುಟುಂಬ ಸಮಾಜಕ್ಕೆ ಮಾದರಿಯಾಗಿದೆ. ಜಯಪ್ರಕಾಶ್ ಶೆಟ್ಟಿ ಅವರಿಗೆ ತನ್ನ ಶಾಲೆಗೊಂದು ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಕೊಡಬೇಕು ಅನ್ನೋದು ಶಾಲಾ ದಿನಗಳಲ್ಲಿಯೇ ಯೋಚನೆ ಇತ್ತಂತೆ. ತಮ್ಮ ಬಾಲ್ಯದ ಕನಸನ್ನು ಸಾಕಾರ ಮಾಡಿದ್ದಾರೆ ಎಂದು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನಂದ್ರೋಳ್ಳಿಯಲ್ಲಿ ಈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಯಪ್ರಕಾಶ್ ಶೆಟ್ಟಿ ಅವರು, ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸಿದ್ದಾರೆ. ಈ ಹಿಂದೆ ಮಕ್ಕಳಿಂದಲೇ ತುಂಬಿ ತುಳುಕುತ್ತಿದ್ದ ಶಾಲೆಯಲ್ಲಿದ್ದ ಶಿಕ್ಷಕರನ್ನು ಅಧಿಕಾರಿಗಳು ಏಕಾಏಕಿಯಾಗಿ ವರ್ಗಾವಣೆ ಮಾಡಿರುವ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲು ಮಾಡಿಸಿದ್ದರು.

ಹೀಗಾಗಿ ಇಂದು ಶಾಲೆಯಲ್ಲಿ ಮಕ್ಕಳ ಕೊರತೆ ಎದುರಿಸುತ್ತಿದೆ. ಯಾವುದೇ ಕಾರಣಕ್ಕೂ ಅಧಿಕಾರಿಗಳು ಶಾಲೆಯಲ್ಲಿರುವ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡಬಾರದು ಎಂದು ನಾರಾಯಣ ಶೆಟ್ಟಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ರಮೇಶ್ ಶೆಟ್ಟಿ ನಂದ್ರೋಳ್ಳಿ ಅವರು ಆಗ್ರಹಿಸಿದ್ದಾರೆ.
ಉದ್ಯಮಿ ಜಯಪ್ರಕಾಶ್ ಶೆಟ್ಟಿ ಅವರ ಸಹಕಾರದಿಂದ ಶಾಲೆ ಇಂದು ಅಭಿವೃದ್ದಿಯನ್ನು ಕಂಡಿದೆ. ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ನಂದ್ರೋಳ್ಳಿಯ ಶಾಲೆಗೆ ಸೇರ್ಪಡೆ ಮಾಡಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷರಾದ ಕೃಷ್ಣಯ್ಯ ಅಚಾರ್ ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಶಾಲೆಗೆ 20 ಲಕ್ಷ ರೂಪಾಯಿ ದೇಣಿಗೆ ನೀಡಿದ ಉದ್ಯಮಿ ಜಯಪ್ರಕಾಶ್ ಶೆಟ್ಟಿ, ಪತ್ನಿ ಹಾಗೂ ತಾಯಿಯವರನ್ನು ಸನ್ಮಾನಿಸಲಾಯಿತು. ಅಲ್ಲದೇ ಶಾಲೆಗೆ ನೆರವು ನೀಡಿದವರನ್ನು ಅಭಿನಂದಿಸಲಾಯ್ತು. ಸಮಾಜಮುಖಿ ವ್ಯಕ್ತಿತ್ವದ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಅವರಂತಹವರು ವ್ಯಕ್ತಿಗಳು ಪ್ರತೀ ಊರಿನಲ್ಲಿಯೂ ಇದ್ರೆ ಆ ಊರು ಅಭಿವೃದ್ದಿಯನ್ನು ಕಾಣುವುದಕ್ಕೆ ಸಾಧ್ಯ. ಜಯಪ್ರಕಾಶ್ ಶೆಟ್ಟಿ ಅವರ ಕಾರ್ಯ ಇದೀಗ ಇತರರಿಗೂ ಮಾದರಿಯಾಗಿದೆ.
ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಮಂಜಯ್ಯ ಶೆಟ್ಟಿ ಸಬ್ಲಾಡಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ನಾರಾಯಣ ಶೆಟ್ಟಿ, ರಘುರಾಮ ಶೆಟ್ಟಿ, ಕರುಣಾಕರ ಶೆಟ್ಟಿ, ಕೆರಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ, ಸುದರ್ಶನ್ ಶೆಟ್ಟಿ ಕೆರಾಡಿ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯರಾದ ಕರುಣಾಕರ್ ಸ್ವಾಗತಿಸಿ ಆತ್ಮನಂದ ಶೆಟ್ಟಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು
Entrepreneur Jayaprakash Shetty Saves Century-Old School Donates 20 Lakh Rupees to Government School

