ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ : ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಸ್ಥಳೀಯರು

ಹಾಸನಬಾಲಕಿಯೋರ್ವಳಿಗೆ ಚುಡಾಯಿಸಿದ ಹಿನ್ನೆಲೆಯಲ್ಲಿ ಕಾಮುಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಹಾಸನ ನಗರದ ಕರಿಗೌಡ ಬಡಾವಣೆಯಲ್ಲಿ ನಡೆದಿದೆ.

ಬಾಲಕಿ ತನ್ನ ಸೈಕಲ್ ನಲ್ಲಿ ಶಾಲೆಗೆ ತೆರಳುತ್ತಿದ್ದಳು. ಹಾಸನದ ಕರೀಗೌಡ ಬಡಾವಣೆಯ ಬಳಿಯಲ್ಲಿ ಬರುತ್ತಿದ್ದಂತೆಯೇ ಹಿಂಬದಿ ಯಿಂದ ಬಂದ ಕಾಮುಕ ಆಕೆಯನ್ನು ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೂಡಲೇ ಸ್ಥಳೀಯರು ಕಾಮುಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ.

ಆರೋಪಿಯನ್ನು ಆಲೂರು ತಾಲೂಕಿನ ಧರ್ಮಪುರಿ ಹೊಸೂರು ಗ್ರಾಮದ ಕುಮಾರ್ ಅಲಿಯಾಸ್ ಮೇಟ್ಲು ಕುಮಾರ್ ಎಂದು ಗುರುತಿಸಲಾಗಿದೆ. ಹೊಸ ಬಸ್ ನಿಲ್ದಾಣದಿಂದ ಅಣತಿ ದೂರದಲ್ಲಿ 3 ಶಾಲಾ ಕಾಲೇಜು ಗಳಿದ್ದು, ಕರಿಗೌಡ ಬಡಾವಣೆಯಲ್ಲಿ ಹೆಚ್ಚಾಗಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳು ಮತ್ತು ಕೆಲಸಕ್ಕೆ ಹೋಗುವ ಮಹಿಳೆಯರು ವಾಸವಿದ್ದಾರೆ. ಈ ಹಿಂದೆ ಇದೇ ಬಡಾವಣೆಯ ಸಮೀಪದಲ್ಲಿ 3 ಕೊಲೆ ಪ್ರಕರಣ ನಡೆದಿವೆ. ಇತ್ತೀಚಿಗೆ ತಂದೆ-ತಾಯಿ ಜೊತೆ ಹೊಸ ಬಸ್ ನಿಲ್ದಾಣದಲ್ಲಿ ಮಲಗಿದ್ದ ಸಂದರ್ಭದಲ್ಲಿ ಪುಟ್ಟ ಬಾಲಕಿ ಯೊಬ್ಬಳನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಪ್ರಕರಣ ಮಾಸುವ ಮುನ್ನವೇ ಈ ಪ್ರಕರಣ ಕೂಡ ನಡೆದಿರುವುದು ಶೋಚನೀಯ.

ಇಲ್ಲಿ ಸುರಕ್ಷತೆ ಇಲ್ಲದ ಕಾರಣ ಈ ರೀತಿಯ ಪುಂಡ-ಪೋಕರಿಗಳು ಮತ್ತು ಕಾಮುಕರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ. ಇನ್ನಾದರೂ ಪೊಲೀಸ್ ಇಲಾಖೆ ಈ ಬಡಾವಣೆ ಹಾಗೂ ಬಸ್ ಸ್ಟ್ಯಾಂಡ್ ಸಮೀಪ ಮತ್ತಷ್ಟು ಗಸ್ತು ಹಾಕಿದರೆ ಪ್ರಕರಣ ತಗ್ಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಘಟನೆಯ ಕುರಿತು  ಬಡಾವಣೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

Comments are closed.