ಜೂನ್ 9 ರವರೆಗೆ ರಾಜ್ಯದಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆ: ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಮಾನ್ಸೂನ್ ಮಳೆ ಚುರುಕುಗೊಳ್ಳಲಿದ್ದು, ಜೂನ್ 4 ರಿಂದ ಜೂನ್ 9 ರವರೆಗೆ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಬೆಂಗಳೂರು: ದೇಶಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದ ನೈಋತ್ಯ ಮುಂಗಾರು (Mansoon) ಜೂನ್ 4 ರಂದು ಅಧಿಕೃತವಾಗಿ ಕೇರಳ ಕರಾವಳಿಯನ್ನು (Coastal Karnataka) ಪ್ರವೇಶಿಸಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲೂ ಮಾನ್ಸೂನ್ ಮಳೆ ಚುರುಕುಗೊಳ್ಳಲಿದ್ದು, ಜೂನ್ 4 ರಿಂದ ಜೂನ್ 9 ರವರೆಗೆ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಜೂನ್ 4 ರಿಂದಲೇ ಸಾಧಾರಣ ಮಳೆ ಆರಂಭವಾಗಲಿದ್ದು, ಜೂನ್ 6 ರಿಂದ ಜೂನ್ 9 ರ ಅವಧಿಯಲ್ಲಿ ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಹಲವು ಭಾಗಗಳಿಗೆ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ಮಲೆನಾಡು ಭಾಗದಲ್ಲೂ ಜೂನ್ 7 ರಿಂದ 9 ರವರೆಗೆ ವ್ಯಾಪಕವಾಗಿ ಮಳೆ ಸುರಿಯುವ ಸಾಧ್ಯತೆಯಿದೆ.
ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ದಿನಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉತ್ತರ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಹಾಗೂ ಮಿಂಚು ಸಹಿತ ಮಳೆ ಅಬ್ಬರಿಸಲಿದೆ ಎಂದು ಎಚ್ಚರಿಸಲಾಗಿದೆ.
ಮುಂಗಾರು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಪಮಾನದಲ್ಲಿ ಇಳಿಕೆಯಾಗಲಿದ್ದು, ಗರಿಷ್ಠ ತಾಪಮಾನ 28°C ನಿಂದ 31°C ಆಸುಪಾಸಿನಲ್ಲಿರಲಿದೆ. ಇದರಿಂದಾಗಿ ಕಳೆದೆರಡು ವಾರಗಳಿಂದ ಇದ್ದ ಸೆಕೆಯಿಂದ ಜನತೆಗೆ ಮುಕ್ತಿ ಸಿಗಲಿದ್ದು, ವಾತಾವರಣ ತಂಪಾಗಲಿದೆ. ನದಿ ಪಾತ್ರದ ಜನರು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.



