ಡಿಕೆಶಿ ಪುತ್ರಿ ಅದ್ದೂರಿ ವಿವಾಹಕ್ಕೆ ಸಿದ್ಧತೆ…! ಅರಿಸಿನ ಶಾಸ್ತ್ರದೊಂದಿಗೆ ಆರಂಭಗೊಂಡಿದೆ ಮದುವೆ ಸಂಭ್ರಮ…!

ಸಿಲಿಕಾನ ಸಿಟಿ ಬೆಂಗಳೂರು ಮತ್ತೊಂದು ಅದ್ದೂರಿ ಹೈಪ್ರೊಫೈಲ್ ಮದುವೆ ಸಾಕ್ಷಿಯಾಗಲಿದ್ದು, ಮಾಜಿಸಿಎಂ ಎಸ್.ಎಂ.ಕೆ ಮೊಮ್ಮಗ ಅಮರ್ತ್ಯ ಹೆಗ್ಡೆ ಹಾಗೂ ಮಾಜಿ ಸಚಿವ ಡಿಕೆಶಿ  ಪುತ್ರಿ ಐಶ್ವರ್ಯಾ ಹೊಸಬದುಕಿಗೆ ಕಾಲಿರಿಸಲು ಸಜ್ಜಾಗಿದ್ದಾರೆ.  ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಅರಿಸಿನ ಶಾಸ್ತ್ರದೊಂದಿಗೆ ವಿವಾಹದ ವಿಧಿ ಆರಂಭಗೊಂಡಿದೆ.

ಕಾಫಿಉದ್ಯಮಿ ದಿ.ಸಿದ್ಧಾರ್ಥ್ ಹೆಗ್ಡೆ ಹಾಗೂ ಮಾಜಿ ಸಚಿವ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವ್ಯಾವಹಾರಿಕ ಬಂಧ ಸಂಬಂಧವಾಗಿ ಬದಲಾಗುತ್ತಿದ್ದು, ಡಿಕೆಶಿಯವರ ರಾಜಕೀಯ ಗುರು ಎಸ್ಎಂಕೃಷ್ಣರೊಂದಿಗೆ ಡಿಕೆಶಿ ಬೀಗತನವನ್ನು ಬೆಸೆದಿದ್ದಾರೆ. ಡಿಕೆಶಿ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ದಿ.ಸಿದ್ಧಾರ್ಥ್ ಹಾಗೂ ಮಾಳವಿಕಾ ಹಿರಿಯ ಪುತ್ರ ಅಮೃರ್ತ್ಯ ಹೆಗ್ಡೆ ವಿವಾಹ ಫೆ.14 ರಂದು ಸಾಂಪ್ರದಾಯಿಕವಾಗಿ ಬೆಂಗಳೂರಿನ ಶೆರಟಾನ್ ಹೊಟೇಲ್ ನಲ್ಲಿ ನಡೆಯಲಿದೆ.

ಫೆ. 10 ರಂದು ಡಿಕೆಶಿಯವರ ಸದಾಶಿವನಗರ ನಿವಾಸದಲ್ಲಿ ಐಶ್ವರ್ಯಾ ಅರಿಸಿನ ಶಾಸ್ತ್ರ ನಡೆದಿದ್ದು, ಎಣ್ಣೆಶಾಸ್ತ್ರ, ಮೆಹೆಂದಿ ಶಾಸ್ತ್ರ ಕೂಡ ಡಿಕೆಶಿ ನಿವಾಸದಲ್ಲೇ ನಡೆಯಲಿದೆ. ಫೆ.17 ರಂದು ಪ್ರೆಸ್ಟಿಜ್ ಗಾಲ್ಫ್ ರೆಸಾರ್ಟ್ ನಲ್ಲಿ ಆರತಕ್ಷತೆ ನಡೆಯಲಿದ್ದು, ಫೆ. 28 ರಂದು ಅರಮನೆ ಮೈದಾನದಲ್ಲಿ ಬೀಗರೂಟ ನಡೆಯಲಿದೆ.

ಈ ಹೈಪ್ರೊಫೈಲ್ ಮದುವೆಗೆ ರಾಹುಲ್ ಗಾಂಧಿ, ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಹಾಗೂ ಕಾಂಗ್ರೆಸ್ ನ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಫೆ.5 ರಂದು ನಗರದ ಖಾಸಗಿ ಹೊಟೇಲ್ ನಲ್ಲಿ ಐಶ್ವರ್ಯಾ-ಅಮೃರ್ತ್ಯ ಮದುವೆಯ ಸಂಗೀತ ಕಾರ್ಯಕ್ರಮ ನಡೆದಿದ್ದು, ವರ ಅಮರ್ತ್ಯ ತನ್ನ ಸಹೋದರನ ಜೊತೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಕುಣಿದು ಎಂಜಾಯ್ ಮಾಡಿದ್ದಾರೆ. ಕೇವಲ ಕುಟುಂಬಸ್ಥರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ಇತ್ತು ಎನ್ನಲಾಗಿದೆ.

ಹೆಣ್ಣು ನೋಡುವ ಶಾಸ್ತ್ರದಿಂದ ಆರಂಭಿಸಿ ಮದುವೆಯ ಪ್ರತಿಯೊಂದು ಶಾಸ್ತ್ರವನ್ನು ಡಿಕೆಶಿ ಕುಟುಂಬಜ್ಯೋತಿಷ್ಯಿ ಬಿ.ಪಿ.ಆರಾಧ್ಯಾ ಸೂಚನೆಯಂತೆ ಡಿಕೆಶಿ ನೆರವೇರಿಸುತ್ತಿದ್ದು, ಅಮೃರ್ತ್ಯ ಹೆಗ್ಡೆ ಕಡೆಯಲ್ಲಿ ಮಾಜಿಸಿಎಂ ಎಸ್ಎಂಕೆ  ಸ್ವತಃ ಮೊಮ್ಮಗನ ಮದುವೆಯ ಪ್ರತಿಯೊಂದು ಜವಾಬ್ದಾರಿ ಹೊತ್ತು ನಡೆಸುತ್ತಿದ್ದಾರೆ.

ಈಗಾಗಲೇ ರಾಜ್ಯ ಮಠಾಧೀಶರು, ಗಣ್ಯರು,ಸಿನಿಮಾನಟ-ನಟಿಯರು ಸೇರಿದಂತೆ ಎಲ್ಲರನ್ನು ಸ್ವತಃ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಆಹ್ವಾನಿಸಿದ್ದು, ಫೆ.14 ಹಾಗೂ 17 ರಂದು ಸಿಲಿಕಾನ ಸಿಟಿ ಅದ್ದೂರಿ ಮದುವೆ ಹಾಗೂ ಆರತಕ್ಷತೆಗೆ ಸಾಕ್ಷಿಯಾಗಲಿದೆ.

Comments are closed.