Mysore : ಸತ್ಯಮಂಗಲದಿಂದ ಮೈಸೂರಿಗೆ ಆರೋಪಿಗಳು : ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌, ಮುಂಬೈ ತೆರಳಿದ ಯುವತಿ

ಮೈಸೂರು : ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಬೇಧಿಸುವಲ್ಲಿ ಮೈಸೂರು ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿ ಗಳನ್ನು ಬಂಧಿಸಿದ್ದು, ಮೈಸೂರಿಗೆ ಕರೆತರುತ್ತಿದ್ದಾರೆ. ಇನ್ನೊಂದೆಡೆ ಸಂತ್ರಸ್ತ ಯುವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ಮುಂಬೈಗೆ ತೆರಳಿದ್ದಾರೆ.

ಮೈಸೂರು ಹೊರವಲಯದ ಚಾಮುಂಡಿ ತಪ್ಪಲಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಸುದ್ದಿ ಮಾಡಿತ್ತು. ಪ್ರಕರಣ ನಡೆದ ಐದು ದಿನಗಳ ಬೆನ್ನಲ್ಲೇ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ. ತಮಿಳುನಾಡು ಮೂಲದ ನಾಲ್ವರು ಹಾಗೂ ಓರ್ವ ಚಾಮರಾಜನಗರ ಮೂಲದ ಆರೋಪಿಯಾಗಿದ್ದಾನೆ. ಎಲ್ಲಾ ಆರೋಪಿಗಳನ್ನು ಸತ್ಯಮಂಗಲದಲ್ಲಿ ಬಂಧಿಸಿ ಇದೀಗ ಮೈಸೂರಿಗೆ ಕರೆತರುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆಯಲ್ಲಿ ಸಂತ್ರಸ್ತ ಯುವತಿ ಮೈಸೂರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದು, ತನ್ನ ಪೋಷಕರ ಜೊತೆಯಲ್ಲಿ ಮುಂಬೈಗೆ ತೆರಳಿದ್ದಾಳೆ ಎನ್ನಲಾಗುತ್ತಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣ ಬೆನ್ನಲ್ಲೇ ಯುವತಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇನ್ನೊಂದೆಡೆಯಲ್ಲಿ ಪೋಷಕರು ಕೂಡ ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರವನ್ನ ಬರೆದಿದ್ದು, ಸದ್ಯಕ್ಕೆ ಯಾವುದೇ ವಿಚಾರಣೆಯನ್ನೂ ನಡೆಸಬಾರದು ಎಂದು ವಿನಂತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಯುವತಿಯನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ.

ಯುವತಿಗೆ ಪೊಲೀಸರು ಪೋಷಕರ ಮೂಲಕ ಧೈರ್ಯ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದೀಗ ಆರೋಪಿಗಳನ್ನು ಬಂಧಿಸಿದ ನಂತರದಲ್ಲಿ ಪೊಲೀಸರು ಯುವತಿಯಿಂದ ಆನ್‌ಲೈನ್‌ ಮೂಲಕ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ

ಇದನ್ನೂ ಓದಿ : ಮೈಸೂರು ಗ್ಯಾಂಗ್‌ರೇಪ್‌ ಪ್ರಕರಣ : ಐವರು ಆರೋಪಿಗಳು ಅರೆಸ್ಟ್‌ ; ಕಾರ್ಯಾಚರಣೆ ಯಶಸ್ವಿ ಎಂದ ಗೃಹ ಸಚಿವರು

ಇದನ್ನೂ ಓದಿ : ಮೈಸೂರು ಸಾಮೂಹಿಕ ಅತ್ಯಾಚಾರ : ಆರೋಪಿಗಳ ಸುಳಿವು ಪತ್ತೆ ಹಚ್ಚಿದ ಪೊಲೀಸರು !

Comments are closed.