ವೇತನ ಕಡಿತಕ್ಕೆ ಪೊಲೀಸರ ವಿರೋಧ : ಪ್ರಾಣ ಪಣಕ್ಕಿಟ್ಟವರಿಗೆ ಇದೆಂತಾ ಅನ್ಯಾಯ ?

0

ಬೆಂಗಳೂರು : ಕೊರೊನಾ ಮಹಾಮಾರಿ ಹರಡುತ್ತಿರೋ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರಿಗೆ ಅಗತ್ಯ ಸೇವೆಗೆ ಪೂರೈಸೋ ಸಲುವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧನಸಹಾಯದ ಮಹಾಪೂರವೇ ಹರಿದು ಬರ್ತಿದೆ. ಸಿಎಂ ಪರಿಹಾರ ನಿಧಿಗೆ ಸರಕಾರಿ ನೌಕರರ ಒಂದು ದಿನ ವೇತನ ನೀಡೋದಕ್ಕೆ ಮುಂದಾಗಿದೆ. ಆದ್ರೆ ಪೊಲೀಸರು ಮಾತ್ರ ಸರಕಾರಿ ನೌಕರರ ಸಂಘದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವಾಗ ವೇತನ ಕಡಿತ ಸರಿಯಲ್ಲ ಎಂದಿದ್ದಾರೆ.

ಕೊರೊನಾ ಮಹಾಮಾರಿ ದೇಶವನ್ನೇ ತಲ್ಲಣಗೊಳಿಸಿದೆ. ಸುಮಾರು 21 ದಿನಗಳ ಲಾಕ್ ಡೌನ್ ನಿಂದಾಗಿ ದೇಶ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಧನ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಸಿಎಂ ಪರಿಹಾರ ನಿಧಿಗೆ ಕೋಟ್ಯಾಂತರ ರೂಪಾಯಿ ದೇಣಿಗೆ ನೀಡಲಾಗುತ್ತಿದೆ. ಅಂತೆಯೇ ಸರಕಾರಿ ನೌಕರರ ಸಂಘ ಕೂಡ ರಾಜ್ಯ ಸರಕಾರಿ ನೌಕರರ ಒಂದು ದಿನದ ವೇತನ ನೀಡೋದಾಗಿ ಘೋಷಿಸಿದೆ. ಮಾತ್ರವಲ್ಲ ಸರಕಾರಕ್ಕೂ ಈ ಕುರಿತು ಮನವಿ ಮಾಡಿದೆ. ಆದರೆ ಒಂದು ದಿನದ ವೇತನ ಕಡಿತ ಮಾಡೋದಕ್ಕೆ ಹೊರಟಿರುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನಿರ್ಧಾರಕ್ಕೆ ಎನ್ ಪಿಎಸ್ ನೌಕರರು ವಿರೋಧ ವ್ಯಕ್ತಪಡಿಸಿದ್ದರು.

ಏಕಪಕ್ಷೀಯ ನಿರ್ಣಯವನ್ನು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರು ಕೈಗೊಳ್ಳುತ್ತಿದ್ದಾರೆ ಅಂತಾ ಆರೋಪಿಸಿದ್ದರು. ಇದೀಗ ಪೊಲೀಸರು ಕೂಡ ಒಂದು ದಿನದ ವೇತನ ಕಡಿತಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದ ಪೊಲೀಸ್ ಸಿಬ್ಬಂಧಿಗಳು ಸರಕಾರಿ ನೌಕರರ ಸಂಘ ತೆಗೆದುಕೊಂಡಿರೋ ನಿರ್ಣಯ ಸರಿಯಲ್ಲ ಎಂದಿದೆ. ಪೊಲೀಸ್ ಇಲಾಖೆ, ಪೌರ ಕಾರ್ಮಿಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ನಂಧಿಗಳು ಸಮಯವನ್ನೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಪ್ರಾಣವನ್ನೂ ಲೆಕ್ಕಿಸದೇ ಕೊರೊನಾ ವಿರುದ್ದ ಹೋರಾಟ ನಡೆಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಹೆಚ್ಚುವರಿ ಕೆಲಸ ಮಾಡುತ್ತಿರೋ ಪೊಲೀಸ್ ಇಲಾಖೆಯ ಸಿಬ್ಬಂಧಿಗಳಿಗೆ ಹೆಚ್ಚುವರಿ ಸಂಬಳ ನೀಡಬೇಕು. ಅದನ್ನು ಬಿಟ್ಟು ವೇತನ ಕಡಿತ ಮಾಡೋದು ಸರಿಯಲ್ಲ ಎಂದು ಸರಕಾರಿ ನೌಕರರ ಸಂಘದ ವಿರುದ್ದವೂ ಅಸಮಾಧಾನವನ್ನು ಹೊರಹಾಕಿದ್ದಾರೆ. ಇತರ ಇಲಾಖೆಗಳಿಗೆ ಹೋಲಿಸಿದ್ರೆ ಕಡಿಮೆ ವೇತನವನ್ನು ಪಡೆಯುತ್ತಿದ್ದಾರೆ. ಸಾಲದಕ್ಕೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂಧಿಗಳ ಕೊರತೆಯಿದೆ. ಇಷ್ಟಿದ್ದರೂ ಕೂಡ ಪೊಲೀಸರು ಕೆಲಸ ನಿರ್ವಹಿಸುತ್ತಿದ್ದಾರೆ.

ಕೊರೊನಾ ವಿರುದ್ದ ಹೋರಾಟದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಮಾನವೀಯ ಕಾರ್ಯಗಳ ಮೂಲಕ ಜನರ ಹಸಿವನ್ನು ತಣಿಸೋ ಕಾಯಕವನ್ನೂ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂಧಿಗಳ ವೇತನ ತಾರತಮ್ಯವನ್ನು ನಿವಾರಿಸೋ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸರಕಾರಕ್ಕೆ ಈಗಾಗಲೇ ವರದಿಯನ್ನು ಸಲ್ಲಿಸಿದ್ದಾರೆ. ಆದರೆ ವರದಿ ಜಾರಿಗೆ ಬಂದಿಲ್ಲ.

ಔರಾದ್ಕರ್ ವರದಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರಿ ನೌಕರರ ಸಂಘ ಕಾರ್ಯನಿರ್ವಹಿಸಿಲ್ಲ, ಜೊತೆಗೆ ಯಾವೊಬ್ಬ ಜನಪ್ರತಿನಿಧಿಗಳು ಕೂಡ ಸಹಕಾರವನ್ನು ಮಾಡಿಲ್ಲ. ಪೊಲೀಸರ ಕ್ಷೇಮಾಭಿವೃದ್ದಿಗಾಗಿ ಸರಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳದೆ, ವೇತನ ಕಡಿತ ಮಾಡೋದು ಸರಿಯಲ್ಲ. ತಮ್ಮ ಪ್ರಾಣ, ಕುಟುಂಬವನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸುವಾಗ ವೇತನ ಕಡಿತ ಮಾಡೋದು ಸರಿಯಲ್ಲ. ಬದಲಾಗಿ ಸರಕಾರ ಪೊಲೀಸರ ವೇತನ ತಾರತಮ್ಯವನ್ನು ನಿವಾರಿಸೋ ಮೂಲಕ ಇನ್ನಷ್ಟು ದಕ್ಷತೆಯಿಂದ ಕೆಲಸ ನಿರ್ವಹಿಸಲು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.

ಈಗಾಗಲೇ ಪೊಲೀಸ್ ಇಲಾಖೆಯ ಸಿಬ್ಬಂಧಿಗಳು ಪತ್ರದಲ್ಲಿ ಸಹಿಯನ್ನು ಮಾಡಿ ಸರಕಾರಿ ನೌಕರರ ಸಂಘಕ್ಕೆ ವೇತನ ಕಡಿತ ಮಾಡೋದ್ರ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ. ಸರಕಾರಿ ನೌಕರರ ಸಂಘ ಏಕಪಕ್ಷೀಯ ನಿರ್ಣಯಗಳೇ ಇದೀಗ ಸಂಘಕ್ಕೆ ಮುಳುವಾಗಿದೆ.

ಸರಕಾರಿ ನೌಕರರ ಸಮಸ್ಯೆಯ ಕುರಿತು ಬೆಳಕು ಚೆಲ್ಲುವಲ್ಲಿ ವಿಫಲವಾಗಿರೋ ರಾಜ್ಯಾಧ್ಯಕ್ಷರ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೊರೊನಾ ವಿರುದ್ದದ ಹೋರಾಟಕ್ಕೆ ಶ್ರಮಿಸುತ್ತಿರೊ ಪೊಲೀಸರ ಸಮಸ್ಯೆಗೆ ಸರಕಾರ ಸ್ಪಂದಿಸಬೇಕಿದೆ.

ವೇತನ ಕಡಿತ ಮಾಡೋ ಬದಲು ಹೆಚ್ಚುವರಿ ವೇತನ ನೀಡೋ ಮೂಲಕ ಪೊಲೀಸ್ ಸಿಬ್ಬಂಧಿಗಳ ಕಣ್ಣೀರೊರೆಸೋ ಕಾರ್ಯವನ್ನು ಮಾಡಲಿ ಅನ್ನೋ ಮಾತುಗಳು ಕೇಳಿಬರುತ್ತಿವೆ.

Leave A Reply

Your email address will not be published.