ಕೊರೋನಾ ವೈರಸ್ ಎರಡನೇ ಅಲೆ ರಾಜ್ಯದಾದ್ಯಂತ ವ್ಯಾಪಿಸಿದೆ. ಸಾವಿನ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಾಗಿದೆ. ಹೀಗಾಗಿ ಸ್ಮಶಾನದ ಸಿಬ್ಬಂದಿ ಹಗಲ-ರಾತ್ರಿ ಚಿತಾಗಾರದಲ್ಲಿ ದುಡಿಯುತ್ತಿದ್ದಾರೆ. ಹೀಗಾಗಿ ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಕಾರ್ಮಿಕರ ರಕ್ಷಣೆಗೆ ಸರ್ಕಾರ ನೆರವಾಗುವಂತೆ ನಟ ಚೇತನ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸ್ಮಶಾನ ಕಾರ್ಮಿಕರ ತಕ್ಷಣದ ಮತ್ತು ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ನಟ ಹಾಗೂ ಹೋರಾಟಗಾರ ಚೇತನ್ ಆಗ್ರಹಿಸಿದ್ದು, ಈ ಬಗ್ಗೆ ಸಿಎಂ ಬಿಎಸ್ವೈಗೆ ವಿವರವಾದ ಪತ್ರ ಬರೆದಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವರ ಮೂಲಕ ಸಿಎಂಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಕೊವೀಡ್ ನಂತಹ ಸಂದಿಗ್ಧ ಹಾಗೂ ಸಂಕಷ್ಟದ ಹೊತ್ತಿನಲ್ಲಿ ಸ್ಮಶಾನದ ಕಾರ್ಮಿಕರು ಕೊವೀಡ್ ವಾರಿಯರ್ ಗಳಾಗಿ ಮುಂಚೂಣಿಯಲ್ಲಿ ದುಡಿಯುತ್ತಿದ್ದಾರೆ. ಸಾಂಕ್ರಾಮಿಕವಾಗಿ ರೋಗ ಹರಡುತ್ತಿರುವ ಸಂದರ್ಭದಲ್ಲೂ ನಿಸ್ವಾರ್ಥದಿಂದ ದುಡಿಯುತ್ತಿರುವ ಈ ಕಾರ್ಮಿಕರಿಗೆ ತಕ್ಷಣ ಸೌಲಭ್ಯಗಳು ಹಾಗೂ ನೆರವಿನ ಅಗತ್ಯವಿದೆ.
ವೈದ್ಯಕೀಯವಿಮೆ, ಕೊವೀಡ್ ಸಂತ್ರಸ್ಥರಿಗೆ ಹಾಗೂ ರೋಗಿಗಳಿಗೆ ಹಾಸಿಗೆ ಹಂಚಿಕೆಯಲ್ಲಿ ಆದ್ಯತೆ, ವಾಕ್ಸಿನೇಶನ್ ನಲ್ಲಿ ಅವಕಾಶ, ಪಿಪಿಇ ಕಿಟ್ ಗಳು, ಮುಖಗವಸು, ಕೈಗ್ಲೌಸ್ ಹಾಗೂ ಸ್ಯಾನಿಟೈಶರ್ ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ.
ಇದರೊಂದಿಗೆ ಅವರು ತಮ್ಮ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಿದರೇ, ಹೆಚ್ಚಿನ ಹಣ ಪಾವತಿಸಬೇಕು. ಉದ್ಯೋಗಿಗಳ ಸಂಖ್ಯೆ ಹೆಚ್ಚಿಸಿ ಅವರ ಹೊರೆ ತಗ್ಗಿಸಬೇಕು. ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ಸ್ಮಶಾನ ಕಾರ್ಮಿಕರಿಗೆ ಎಲ್ಲ ಸೌಲಭ್ಯ ಸಿಗಬೇಕು.
ಹೀಗೆ ಸಾಕಷ್ಟು ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ಚೇತನ್ ಬರೆದಿದ್ದು, ಈ ಪತ್ರ ಹಾಗೂ ಬೇಡಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಡಪಂಥೀಯ ವಿಚಾರಧಾರೆಗಳೊಂದಿಗೆ ಗುರುತಿಸಿಕೊಂಡಿರುವ ಚೇತನ್ ಈ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
Comments are closed.