19 ವರ್ಷದ ಯುವತಿಯನ್ನು ಮದುವೆಯಾದ ಶಾಸಕ…! ಅಂತರಜಾತಿ ವಿವಾಹಕ್ಕೆ ತೀವ್ರ ವಿರೋಧ…!!

0

ವಿಲ್ಲುಪುರಂ: ಶಾಸಕರೊಬ್ಬರ ಅಂತರಜಾತೀಯ ವಿವಾಹ ಕೆಲಕಾಲ ಆತಂಕಕ್ಕೆ ಕಾರಣವಾಗಿ, ಸೀನಿಮಿಯ ವಿರೋದಗಳನ್ನು ಎದುರಿಸಿದ ಬಳಿಕ ಸುಖಾಂತ್ಯ ಕಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ತಮಿಳುನಾಡಿನ ಆಡಳಿತ ಪಕ್ಷದ ಕಲ್ಲಕುರುಚಿ ಶಾಸಕ 35 ವರ್ಷದ ಪ್ರಭು, ತಮ್ಮ ಗ್ರಾಮದ ನಿವಾಸಿ 19 ವರ್ಷದ ಸೌಂದರ್ಯ ಅವರನ್ನು ನಿನ್ನೆ ತಮ್ಮ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಆದರೆ ಶಾಸಕರ ಮದುವೆ ವೇಳೆ ವಧುವಿನ ತಂದೆ ಎಸ್.ಸ್ವಾಮಿನಾಥನ್ ಶಾಸಕರ ನಿವಾಸದ ಎದುರು ತಮ್ಮ ಮಗಳನ್ನು ಅಪಹರಿಸಿ ಶಾಸಕರು ವಿವಾಹವಾಗುತ್ತಿದ್ದಾರೆ ಎಂದು ಆರೋಪಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿ ಪೊಲೀಸರು ವಧುವಿನ ತಂದೆಯನ್ನು ವಶಕ್ಕೆ ಪಡೆದು ಅವರಿಂದ ಮುಚ್ಚಳಿಕೆ ಬರೆದುಕೊಂಡು ಕಳುಹಿಸಿದ್ದಾರೆ.


ಮೂಲಗಳ ಮಾಹಿತಿ ಪ್ರಕಾರ ಶಾಸಕ ಪ್ರಭು ಹಾಗೂ ಯುವತಿ ಸೌಂದರ್ಯ, ಥೈಯಗದುರ್ಗಂ ನಿವಾಸಿಗಳಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಶಾಸಕ ಪ್ರಭು ಕೆಳಜಾತಿಯವರಾಗಿದ್ದು, ಸೌಂದರ್ಯ ಅದೇ ಗ್ರಾಮದ ಅರ್ಚಕರ ಪುತ್ರಿ. ಹೀಗಾಗಿ ಸೌಂದರ್ಯ ತಂದೆ ಸ್ವಾಮಿನಾಥನ್ ಈ ಮದುವೆಗೆ ಒಪ್ಪಿರಲಿಲ್ಲ. ಹೀಗಾಗಿ ಸೌಂದರ್ಯ ಮನೆ ಬಿಟ್ಟು ಶಾಸಕರ ಮನೆಗೆ ತೆರಳಿದ್ದು, ಬಳಿಕ ಅಲ್ಲೇ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.


ಈ ಮಧ್ಯೆ ಸ್ವಾಮಿನಾಥನ್ ತಮಗೆ ಶಾಸಕ ಪ್ರಭು ಬೆಂಬಲಿಗರು ಜೀವಬೆದರಿಕೆ ಹಾಕಿದ್ದು, ತಮ್ಮ ಮಗಳನ್ನು ಅಪಹರಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೆ ವಿವಾಹದ ಬಳಿಕ ಶಾಸಕ ಪ್ರಭು ಹಾಗೂ ಅವರ ಪತ್ನಿ ಸೌಂದರ್ಯ ಹೇಳಿಕೆಯ ವಿಡಿಯೋ ರಿಲೀಸ್ ಮಾಡಿದ್ದು, ಅದರಲ್ಲಿ ಅರ್ಚಕರ ಪುತ್ರಿ ಸೌಂದರ್ಯ ತಾನು ಸ್ವಯಂ ಇಚ್ಛೆಯಿಂದಲೇ ಪ್ರಭು ಅವರನ್ನು ವಿವಾಹವಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಅವರನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಕೇವಲ 19 ವರ್ಷದ ಸೌಂದರ್ಯ ಸ್ಥಳೀಯ ಕಾಲೇಜ್ ಒಂದರಲ್ಲಿ ದ್ವಿತೀಯ ಪಿಯುಸಿ ಅಧ್ಯಯನ ಮಾಡುತ್ತಿದ್ದಾಳೆ. ಒಟ್ಟಿನಲ್ಲಿ ಶಾಸಕರ ಮದುವೆ ಪ್ರದರ್ಶನ ಸಿನಿಮಿಯ ರೀತಿಯಲ್ಲಿ ನಡೆದಿದ್ದು, ಕೊನೆಯಲ್ಲಿ ಸುಖಾಂತ್ಯ ಕಂಡಿದೆ.

Leave A Reply

Your email address will not be published.