ಕರ್ನಾಟಕ ಬಜೆಟ್ 2026: ಸಿದ್ದರಾಮಯ್ಯ ಬಜೆಟ್ ನಲ್ಲಿ ಕರಾವಳಿಗೆ ಕೊಟ್ಟಿದ್ದೇನು ?
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 17ನೇ ಬಜೆಟ್ನಲ್ಲಿ ಉಡುಪಿ ಜಿಲ್ಲೆ ಹಾಗೂ ಕರಾವಳಿ ಭಾಗಕ್ಕೆ ನಿರೀಕ್ಷಿತ ಮಟ್ಟದ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ
ಉಡುಪಿ : karnataka budget 2026: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 17ನೇ ಬಜೆಟ್ನಲ್ಲಿ ಉಡುಪಿ ಜಿಲ್ಲೆ ಹಾಗೂ ಕರಾವಳಿ ಭಾಗಕ್ಕೆ ನಿರೀಕ್ಷಿತ ಮಟ್ಟದ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ. ಹಾಗಾದ್ರೆ ಸಿದ್ದರಾಮಯ್ಯ ಕರಾವಳಿ ಜನತೆಗೆ ಈ ಬಾರಿಯ ಬಜೆಟ್ನಲ್ಲಿ ಕೊಟ್ಟಿದ್ದೇನು ಅನ್ನೋ ಮಾಹಿತಿ ಇಲ್ಲಿದೆ.
ಕರಾವಳಿಗರಿಗೆ ಬಜೆಟ್ನ ಕೊಡುಗೆಗಳೇನು ?
ಕೋಮು ಸೌಹಾರ್ದತೆಗಾಗಿ ವಿಶೇಷ ಕಾರ್ಯಪಡೆ
ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ದ್ವೇಷ ಭಾಷಣ ಹಾಗೂ ಸಂಭಾವ್ಯ ಕೋಮು ಗಲಭೆಗಳನ್ನು ನಿಯಂತ್ರಿಸಲು ಸರ್ಕಾರವು ‘ವಿಶೇಷ ಕಾರ್ಯಪಡೆ’ (Special Task Force) ರಚಿಸುವುದಾಗಿ ಘೋಷಿಸಿದೆ. ಕರಾವಳಿ ಭಾಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಕರಾವಳಿಯಲ್ಲಿ 300 ಕಾಲುಸಂಕಗಳ ನಿರ್ಮಾಣ
ಮಲೆನಾಡು ಮತ್ತು ಕರಾವಳಿ ಪ್ರದೇಶದ ಹಳ್ಳಿಗಳಲ್ಲಿ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಚಾರದ ಸುರಕ್ಷತೆಗಾಗಿ 300 ಹೊಸ ಕಾಲುಸಂಕಗಳನ್ನು (Foot Bridges) ನಿರ್ಮಾಣ ಮಾಡಲಾಗುವುದು. ಇದು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ಸಂಪರ್ಕ ವ್ಯವಸ್ಥೆಗೆ ದೊಡ್ಡ ಬಲ ನೀಡಲಿದೆ.
Also Read: ಸಿದ್ದರಾಮಯ್ಯ ಬಜೆಟ್ ಬೃಹತ್ ಶೂನ್ಯ : ಬಿಜೆಪಿ ಹಿರಿಯ ಶಾಸಕ ಸುನಿಲ್ ಕುಮಾರ್
ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ
ಉಡುಪಿ ಜಿಲ್ಲೆಯ ಕರಾವಳಿ ಪ್ರವಾಸೋದ್ಯಮಕ್ಕೆ ಬಜೆಟ್ನಲ್ಲಿ ಮನ್ನಣೆ ಸಿಕ್ಕಿದೆ:
- ಮಟ್ಟು-ಪಡುಬಿದ್ರಿ ಸೈಕಲ್ ಟ್ರ್ಯಾಕ್: ಮಟ್ಟು ಮತ್ತು ಪಡುಕೆರೆ ಬೀಚ್ಗಳನ್ನು ಸಂಪರ್ಕಿಸುವ ಸುಮಾರು 11.7 ಕಿ.ಮೀ ಉದ್ದದ ಸೈಕಲ್ ಟ್ರ್ಯಾಕ್ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.
- ಕೋಡಿ ಬೀಚ್ ಅಭಿವೃದ್ಧಿ: ಕುಂದಾಪುರದ ಕೋಡಿ ಬೀಚ್ನಲ್ಲಿ ರೆಸಾರ್ಟ್, ಪ್ರವಾಸಿ ಸೌಲಭ್ಯಗಳು ಮತ್ತು ವಾಟರ್ ರೈಡ್ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
- ಮಲ್ಪೆ ಬೀಚ್: ಮಲ್ಪೆ ಬೀಚ್ನಲ್ಲಿ ಪ್ರವಾಸಿಗರಿಗಾಗಿ ಆಧುನಿಕ ಸೌಕರ್ಯಗಳು ಮತ್ತು ರೆಸಾರ್ಟ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮೀನುಗಾರಿಕೆ ಮತ್ತು ಬಂದರು ಅಭಿವೃದ್ದಿ
- ಹೆಜಮಾಡಿ ಕೋಡಿ: ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನು ಇಳಿನಾಣ ಕೇಂದ್ರದ (Fish Landing Center) ಅಭಿವೃದ್ಧಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಇದಕ್ಕೆ ಪೂರಕವಾದ ನೆರವನ್ನು ಮುಂದುವರಿಸಲಾಗಿದೆ.
- ಮಲ್ಪೆ ಬಂದರು: ಮಲ್ಪೆ ಮೀನುಗಾರಿಕಾ ಬಂದರಿನ ಮೂರನೇ ಹಂತದ ವಿಸ್ತರಣೆ ಮತ್ತು ಆಧುನೀಕರಣಕ್ಕೆ ಒತ್ತು ನೀಡಲಾಗಿದೆ.
ಕೃಷಿ ಮತ್ತು ತೋಟಗಾರಿಕೆ
ಕರಾವಳಿ ಭಾಗದ ಪ್ರಮುಖ ಬೆಳೆಗಳಾದ ತೆಂಗು, ಗೇರು ಮತ್ತು ಕೋಕೋ ಬೆಳೆಗಳ ಉತ್ಪಾದಕತೆ ಹೆಚ್ಚಿಸಲು ಮತ್ತು ಇವುಗಳನ್ನು 2030ರ ವೇಳೆಗೆ ಜಾಗತಿಕ ಬ್ರ್ಯಾಂಡ್ ಆಗಿ ರೂಪಿಸಲು ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಇದು ಉಡುಪಿಯ ರೈತರಿಗೆ ವರದಾನವಾಗಲಿದೆ.



