ಬ್ರಹ್ಮಾವರದಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ : ಗೌತಮ್ ಸಾವಿನ ಸುತ್ತ ಹಲವು ಅನುಮಾನ

ಬ್ರಹ್ಮಾವರ : ಕಳೆದೆರಡು ದಿನಗಳ ಹಿಂದೆಯಷ್ಟೇ ಬಾರಕೂರು ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಯುವಕ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.

52ನೇ ಹೇರೂರು ಗ್ರಾಮದ ಹೇರಂಜೆಯ ಗೌತಮ್ ( 21 ವರ್ಷ) ಎಂಬಾತನೇ ಸಾವನ್ನಪ್ಪಿದ ದುರ್ದೈವಿ. ಅಕ್ಟೋಬರ್ 15ರಂದು ಬೆಳಗ್ಗೆ 8 ಗಂಟೆಗೆ ತನ್ನ ತಾಯಿಯನ್ನು ಚಾಂತಾರಿನಲ್ಲಿರುವ ಗೇರುಬೀಜ ಪ್ಯಾಕ್ಟರಿಗೆ ಕೆಲಸಕ್ಕೆ ಬಿಟ್ಟು, ನಂತರದಲ್ಲಿ ತಾನು ಕೆಲಸಕ್ಕೆ ಹೋಗುವುದಾಗಿ ಬ್ರಹ್ಮಾವರಕ್ಕೆ ಹೋಗುವುದಾಗಿ ಹೇಳಿದ್ದ. ರಾತ್ರಿಯಾದ್ರೂ ಮನೆಗೆ ಬಾರದೇ ಇದ್ದಾಗ, ತಾನು ಸ್ನೇಹಿತರ ಮನೆಯಲ್ಲಿ ಮ್ಯಾಚ್ ನೋಡುತ್ತಿರುವುದಾಗಿಯೂ ಹೇಳಿದ್ದ. ಆದರೆ ಮರುದಿನವೂ ಮನೆಗೆ ಬಂದಿರಲಿಲ್ಲ.

ಇದರಿಂದ ಅನುಮಾನಗೊಂಡ ಮನೆಯವರು ಹುಡುಕಾಟ ನಡೆಸೋದಕ್ಕೆ ಶುರುಮಾಡಿದ್ದಾರೆ. ಬಾರಕೂರು ಸೇತುವೆಯ ಬಳಿಯಲ್ಲಿ ಗೌತಮ್, ಬೈಕ್, ಜಾಕೆಟ್ ಹಾಗೂ ಹೆಲ್ಮೆಟ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇಂದು ಗೌತಮ್ ಶವ ಹೊಳೆಯಲ್ಲಿ ಪತ್ತೆಯಾಗಿದೆ.

ಗೌತಮ್ ಸಾವು ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಡಿಪ್ಲೊಮಾ ಪದವೀಧರನಾಗಿದ್ದರೂ ಕೂಡ ಕೆಲಸ ಸಿಗದೇ ಇರುವ ನೋವಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗುತ್ತಿದೆ. ಗೌತಮ್ ತಂದೆ ದಾಮೋದರ ದೇಶ ಭಂಡಾರಿ ನೀಡಿರುವ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.