ನದಿಯಲ್ಲಿ ಮುಳುಗಿ ನಾಲ್ವರು ಸಾವು : ಮದುವೆಗೆಂದು ಬಂದಿದ್ದವರು ಮಸಣ ಸೇರಿದ್ರು

ಮೂಡಬಿದಿರೆ : ನದಿಗೆ ಈಜಲು ತೆರಳಿದ್ದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಕಡಂದಲೆಯಲ್ಲಿ ನಡೆದಿದೆ.

ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18 ವರ್ಷ), ಅರ್ಶಿತಾ (20 ವರ್ಷ), ವೇಣೂರಿನ ಸುಭಾಸ್ (19 ವರ್ಷ) ಹಾಗೂ ಪೆರಾರದ ರವಿ (30 ವರ್ಷ) ಎಂಬವರೇ ಮೃತ ದುರ್ದೈವಿಗಳು.

ಕಡಂದಲೆಯ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆಗೆಂದು ಯುವಕರು ಬಂದಿದ್ದರು. ಈ ವೇಳೆಯಲ್ಲಿ ಮೂವರು ಯುವಕರು ಹಾಗೂ ಓರ್ವ ಯುವತಿ ಸೇರಿದಂತೆ ಒಟ್ಟು ನಾಲ್ವರು ಈಜುವುದಕ್ಕೆ ಶಾಂಭವಿ ನದಿಗೆ ತೆರಳಿದ್ದಾರೆ. ನದಿಯಲ್ಲಿ ಈಜುವ ವೇಳೆಯಲ್ಲಿ ಓರ್ವ ನೀರಿನ ರಭಸಕ್ಕೆ ಸಿಲುಕಿದ್ದ. ಈ ವೇಳೆಯಲ್ಲಿ ಉಳಿದ ಮೂವರು ರಕ್ಷಣೆಗೆ ಮುಂದಾಗಿದ್ದಾರೆ. ಇದರಿಂದಾಗಿ ನಾಲ್ವರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಮೂಡಬಿದಿರೆ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.