ಬ್ಯಾಂಕ್ ನಿಂದ ವಿಥ್ ಡ್ರಾ ಮಾಡಿದ್ದ ನಿವೃತ್ತ ಶಿಕ್ಷಕರ 6.74 ಲಕ್ಷ ಹಣ ಕಳವು

ಚಿತ್ರದುರ್ಗ : ಬ್ಯಾಂಕಿನಿಂದ ನಿವೃತ್ತ ಶಿಕ್ಷಕರೋರ್ವರು ಡ್ರಾ ಮಾಡಿಕೊಂಡು ಬಂದಿದ್ದ ಬರೋಬ್ಬರಿ 6.74 ಲಕ್ಷ ರೂಪಾಯಿಯನ್ನು ಕಳ್ಳರು ಕಳವು ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರಿನಲ್ಲಿ ನಡೆದಿದೆ.

ಹಿರೇಕಂದವಾಡಿ ಗ್ರಾಮದ ನಿವೃತ್ತ ಶಿಕ್ಷಕ ರಾಜಪ್ಪ (72 ವರ್ಷ) ಎಂಬವರೇ ಹಣವನ್ನು ಕಳೆದುಕೊಂಡವರು. ಚಿಕ್ಕ ಜಾಜೂರಿನಲ್ಲಿರುವ ಕೆನರಾ ಬ್ಯಾಂಕಿನಿಂದ 6.74 ಲಕ್ಷ ರೂಪಾಯಿ ಹಣವನ್ನು ರಾಜಪ್ಪ ಅವರು ವಿಥ್ ಡ್ರಾ ಮಾಡಿದ್ದರು. ಹಣವನ್ನು ತನ್ನ ಕೈಯಲ್ಲಿದ್ದ ಬ್ಯಾಗಿನಲ್ಲಿ ಹಾಕಿಕೊಂಡು ರೇಷನ್ ಅಂಗಡಿಗೆ ತೆರಳಿದ್ದಾರೆ.ಬ್ಯಾಂಕಿನಿಂದ ವಿಥ್ ಡ್ರಾ ಮಾಡಿರುವ ಹಣದಲ್ಲಿ 4ಸಾವಿರ ರೂಪಾಯಿ ಹಣವನ್ನು ಜೇಬಿಗೆ ಹಾಕಿಕೊಂಡಿದ್ದರು.

ರೇಷನ್ ಅಂಗಡಿಯವರಿಗೆ ಹಣ ನೀಡುವಾಗ ತನ್ನ ಕೈಯಲ್ಲಿದ್ದ ಬ್ಯಾಗ್ ಅನ್ನು ಪಕ್ಕದಲ್ಲಿದ್ದ ಸಿಮೆಂಟ್ ಕಟ್ಟೆಯ ಮೇಲೆ ಇಟ್ಟಿದ್ದಾರೆ. ಅಂಗಡಿಯವರಿಗೆ ಹಣ ನೀಡಿ ಹಿಂದಿರುಗುವ ಹೊತ್ತಿಗಾಗಲೇ ಹಣ ಚೀಲ ನಾಪತ್ತೆಯಾಗಿದೆ. ಅಕ್ಕಪಕ್ಕದಲ್ಲಿದ್ದವರನ್ನೆಲ್ಲಾ ವಿಚಾರಿಸಿದ್ರೆ ಹಣದ ಚೀಲ ಪತ್ತೆಯಾಗಲೇ ಇಲ್ಲ.

ಕೊನೆಗೆ ಚಿಕ್ಕಜಾಜೂರು ಠಾಣೆಗೆ ನಿವೃತ್ತ ಶಿಕ್ಷಕ ರಾಜಪ್ಪ ದೂರು ನೀಡಿದ್ದಾರೆ. ಪಿಎಸ್ ಐ ಸ್ವಾಮಿ ನೇತೃತ್ವದಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ. ಕಳ್ಳರು ಶಿಕ್ಷಕರನ್ನು ಬ್ಯಾಂಕ್ ನಿಂದಲೇ ಫಾಲೋ ಮಾಡಿಕೊಂಡು ಬಂದಿರುವ ಸಾದ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಸುತ್ತಮುತ್ತಲೂ ಹಾಗೂ ಅಂಗಡಿ ಸುತ್ತಮುತ್ತಲೂ ಪರಿಶೀಲನೆಯನ್ನು ನಡೆಸಲಾಗುತ್ತಿದೆ.

Comments are closed.