ಮನೆಯವರನ್ನು ಕಟ್ಟಿಹಾಕಿ ದರೋಡೆ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ : ಕರಾವಳಿಯಲ್ಲಿ ಆತಂಕ ..!

ಕೊಕ್ಕಡ : ಮನೆಯೊಂದಕ್ಕೆ ನುಗ್ಗಿದ 9 ಮಂದಿ ದುಷ್ಕರ್ಮಿಗಳು ಮನೆಯ ಮಂದಿಯನ್ನು ಕಟ್ಟಿಹಾಕಿ ಲಕ್ಷಾಂತರ ರೂಪಾಯಿ ನಗ, ನಗದು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದಲ್ಲಿ ನಡೆದಿದೆ.

ಸೌತಡ್ಕ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿರುವ ವಿಶ್ವಹಿಂದೂ ಪರಿಷತ್ ನ ಕೊಕ್ಕಡ ವಲಯ ಅಧ್ಯಕ್ಷರಾಗಿದ್ದ ನೂಜೆ ತುಕ್ರಪ್ಪ ಶೆಟ್ಟಿಯವರ ಮನೆಗೆ ಸುಮಾರು ಒಂಭತ್ತು ಮಂದಿ ದರೋಡೆಕೋರರ ತಂಡ ಮನೆಯವರನ್ನು ಸ್ಥಳದಲ್ಲೇ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ತುಕ್ರಪ್ಪ ಶೆಟ್ಟಿ ಯವರ ಪತ್ನಿಯನ್ನು ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ತುಕ್ರಪ್ಪ ಶೆಟ್ಟಿ ಅವರ ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳು ಮಾತ್ರವೇ ಇದ್ದರು. ಈ ವೇಳೆಯಲ್ಲಿ ಮಾರಕಾಸ್ತ್ರ ತೋರಿಸಿ ಮನೆಯೊಳಗೆ ನುಗ್ಗಿದ್ದ ದುಷ್ಕರ್ಮಿಗಳು ಮನೆ ಮಂದಿಯನ್ನು ಕಟ್ಟಿ ಹಾಕಿದ್ದಾರೆ. ನಂತರ ಮನೆಯನ್ನೆಲ್ಲಾ ಜಾಲಾಡಿ, ಬೆಳಗಿನ ಜಾವ ಮನೆಯಿಂದ ಹೊರ ಹೋಗಿದ್ದಾರೆ. ಡಕಾಯಿತರು ಮನೆಯಿಂದ ತೆರಳುತ್ತಿದ್ದಂತೆಯೇ ಧರ್ಮಸ್ಥಳ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿಬಂದ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ. ಮಾತ್ರವಲ್ಲ ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದು, ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

Comments are closed.