ಗುರುರಾಘವೇಂದ್ರ ಬ್ಯಾಂಕ್ ಹಗರಣ : 1400 ಕೋಟಿ ಅವ್ಯವಹಾರ ಪತ್ತೆ: ಬ್ಯಾಂಕ್ ಅಧ್ಯಕ್ಷ, ಸಿಇಓಗೆ ಬಂಧನದ ಭೀತಿ

0

ಬೆಂಗಳೂರು : ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನಲ್ಲಿ ನಡೆದಿರುವ ಅವ್ಯವಹಾರ ಬಯಲಾಗಿದೆ. ಬ್ಯಾಂಕಿನಲ್ಲಿ ಬರೋಬ್ಬರಿ 1,400 ಕೋಟಿ ಅವ್ಯವಹಾರ ನಡೆದಿರುವುದನ್ನು ಎಸಿಬಿ ಪತ್ತೆ ಹಚ್ಚಿದೆ. ಎಸಿಬಿ ದಾಳಿಯ ಬೆನ್ನಲ್ಲೇ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹಾಗೂ ಸಿಇಓ ವಾಸುದೇವ ಮಯ್ಯ ನಾಪತ್ತೆಯಾಗಿದ್ದು, ಬಂಧನದ ಭೀತಿ ಎದುರಾಗಿದೆ.

ಬಸವನಗುಡಿಯಲ್ಲಿರುವ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಒಂದೊಂದೆ ಅವ್ಯವಹಾರ ಬಯಲಾಗುತ್ತಲೇ ಇದೆ. ಕಳೆದಾರು ತಿಂಗಳ ಹಿಂದೆಯೆಷ್ಟೇ ಬ್ಯಾಂಕಿನಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿತ್ತು. ಮಾತ್ರವಲ್ಲ ಭಾರತೀಯ ರಿಸರ್ವ್ ಬ್ಯಾಂಕ್ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಎಸಿಬಿ ದಾಳಿ ನಡೆಸಿದೆ. ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಅವರ ಬಸವನಗುಡಿಯ ಮನೆ, ಸಿಇಓ ವಾಸುದೇವ ಮಯ್ಯ ಅವರ ಮನೆ ಸೇರಿದಂತೆ ಬೆಂಗಳೂರಿನ ನಾಲ್ಕು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ. ದಾಳಿಯ ವೇಳೆ ರಾಮಕೃಷ್ಣ ಅವರ ಮನೆಯಲ್ಲಿ ಬ್ಯಾಂಕಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದೆ.

ಗ್ರಾಹಕರಿಗೆ ಅತೀಯಾದ ಬಡ್ಡಿಯ ಆಸೆಯನ್ನು ತೋರಿಸಿ ಬ್ಯಾಂಕಿನ ಆಡಳಿತ ಮಂಡಳಿ ಗ್ರಾಹಕರಿಂದ 2,400 ಕೋಟಿ ರೂಪಾಯಿ ಹಣವನ್ನು ಠೇವಣಿ ಇರಿಸಿಕೊಂಡಿದ್ದಾರೆ. ಈ ಪೈಕಿ ಸುಮಾರು 1,400 ಕೋಟಿ ರೂಪಾಯಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದಿದೆ. 150 ಕೋಟಿ ರೂಪಾಯಿ ಗ್ರಾಹಕರ ಹಣವನ್ನು ಬ್ಯಾಂಕ್ ಸಿಬ್ಬಂಧಿ ಹಾಗೂ ಅಧಿಕಾರಿಗಳು ತಮ್ಮ ಖಾತೆಗಳಿಗೆ ವರ್ಗಾವಣೆಯನ್ನು ಮಾಡಿಸಿಕೊಂಡಿದ್ದಾರೆ. ಅಲ್ಲದೇ ಬೋಗಸ್ ಖಾತೆಗಳನ್ನು ತೆರೆದು 150 ಕೋಟಿ ರೂಪಾಯಿಯನ್ನು ಸಾಲ ನೀಡಲಾಗಿದೆ.

ಇನ್ನು ರಿಯಲ್ ಎಸ್ಟೇಟ್ ವ್ಯವಹಾರ, ಉದ್ಯಮದ ಹೆಸರಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಸಾಲವನ್ನು ಕಮಿಷನ್ ಆಧಾರದ ಮೇಲೆ ನೀಡಲಾಗಿದೆ. ಆದರೆ ಈ ಹಣ ರಿಕವರಿ ಆಗಿರಲಿಲ್ಲ. ಬ್ಯಾಂಕಿನಲ್ಲಿ ನಡೆಯುತ್ತಿದ್ದ ಆಡಿಟ್ ರಿಪೋರ್ಟ್ ಮೇಲೆ ಕಣ್ಣಿಟ್ಟಿದ್ದ ರಿಸರ್ವ್ ಬ್ಯಾಂಕ್, ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ವ್ಯವಹಾರದ ಮೇಲೆ ನಿರ್ಬಂಧವನ್ನು ಹೇರಿತ್ತು.

ಬ್ಯಾಂಕಿನ ಅಧ್ಯಕ್ಷರಾಗಿರುವ ರಾಮಕೃಷ್ಣ ಹಾಗೂ ಸಿಇಓ ವಾಸುದೇವ ಮಯ್ಯ ಟೀಂ ಶಂಕರಪುರದಲ್ಲಿ ಗುರು ಸಾರ್ವಭೌಮ ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಆರಂಭಿಸಿತ್ತು. ಈ ಸೊಸೈಟಿಯಲ್ಲಿಯೂ ಭಾರೀ ಪ್ರಮಾಣದ ಅಕ್ರಮವೆಸಗಿರುವುದು ಎಸಿಬಿ ದಾಳಿಯ ವೇಳೆಯಲ್ಲಿ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಬ್ಯಾಂಕ್ ಅಕ್ರಮದ ಹಿನ್ನೆಲೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಹಾಗೂ ಸಿಇಓ ಅವರನ್ನು ಬಂಧಿಸುವ ಸಾಧ್ಯತೆಯಿದೆ.

Leave A Reply

Your email address will not be published.