ಸ್ವಯಂಪ್ರೇರಿತ ರಕ್ತದಾನ ಅಭಿಯಾನಕ್ಕೆ ಚಾಲನೆ : ರಕ್ತದಾನ ಶಿಬಿರಗಳಿಗೆ ಅಡ್ಡಿಯಾಗದಿರಲಿ ಕೊರೊನ : ಡಾ.ಅವಿನಾಶ್ ಶೆಟ್ಟಿ

0

ಮಣಿಪಾಲ : ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಮೊಗವೀರ ಯುವಸಂಘಟನೆಯ ವತಿಯಿಂದ ವರ್ಷಂಪ್ರತಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು, ಇದುವರೆಗೂ ಲಕ್ಷಾಂತರ ಯೂನಿಟ್ ರಕ್ತವನ್ನು ದಾನಮಾಡಲಾಗಿದೆ. ಅಂತೆಯೇ ರಕ್ತನಿಧಿ ಕೇಂದ್ರ ಕೆಎಂಸಿ ಮಣಿಪಾಲ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ 2020ರ ಸಾಲಿನ ಸ್ವಯಂಪ್ರೇರಿತ ರಕ್ತದಾನ ಅಭಿಯಾನದ ಉದ್ಘಾಟನಾ ಸಮಾರಂಭ ಮಣಿಪಾಲ ಕೆಎಂಸಿ ರಕ್ತನಿಧಿ ಕೇಂದ್ರದಲ್ಲಿ ನಡೆಯಿತು.

ರಕ್ತದಾನ ಶಿಬಿರಗಳಿಗೆ ಚಾಲನೆ ನೀಡಿದ ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕರಾದ ಡಾ ಅವಿನಾಶ್ ಶೆಟ್ಟಿಯವರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ಹನ್ನೆರಡು ವರ್ಷಗಳಿಂದ ನಿರಂತರ ರಕ್ತದಾನ ಶಿಬಿರಗಳನ್ನು ನೆರವೇರಿಸುವ ಮೂಲಕ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಯುನಿಟ್ ರಕ್ತವನ್ನು ದಾನವಾಗಿ ನೀಡುವ ಮೂಲಕ ಉಡುಪಿ ಜಿಲ್ಲೆಯನ್ನು ರಕ್ತದಾನಿಗಳ ಜಿಲ್ಲೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿಸಿದವರು ನಾಡೋಜ ಡಾ ಜಿ ಶಂಕರ್ ರವರು. ಕೋವಿಡ್ -19 ರ ಈ ಕ್ಲಿಷ್ಟಕರ ಸಮಯದಲ್ಲೂ ಮೊಗವೀರ ಯುವ ಸಂಘಟನೆಯವರು ಜಿ ಶಂಕರ್ ರವರ ಮಾರ್ಗದರ್ಶನದಲ್ಲಿ ನಡೆಸುವ ಈ ಸಾಲಿನ ರಕ್ತದಾನ ಶಿಬಿರಗಳಿಗೆ ಕೊರೊನ ಅಡ್ಡಿಯಾಗದಿರಲಿ ಎಂದರು.

ನಾಡೋಜಾ ಡಾ.ಜಿ.ಶಂಕರ್ ಅವರು ಮಾತನಾಡಿ, ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣ ಬಹಳ ಮುಖ್ಯ, ಈಗಾಗಲೇ ಕೊರೊನ ಸಂಕಷ್ಟಕ್ಕೀಡಾದವರಿಗೆ ಅಪಾರ ಪ್ರಮಾಣದಲ್ಲಿ ಆಹಾರ ಕಿಟ್, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಉಡುಪಿ, ದಕ್ಷಿಣ, ಕನ್ನಡ ಶಿವಮೊಗ್ಗ, ವಿಜಯಪುರ ಜಿಲ್ಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಹೀಗೆ ಸುಮಾರು 2.50 ಕೋಟಿಗೂ ಮಿಕ್ಕಿದ ಕೊರೊನ ರಕ್ಷಣಾ ಪರಿಕರಗಳನ್ನು ಕೋವಿಡ್ -19 ಪ್ಯಾಕೇಜ್ ನಡಿ ನೀಡಿದ್ದೇವೆ, ಕೊರೊನ ರೋಗದೊಂದಿಗೆ ರಕ್ತದ ಅಭಾವದಿಂದ ಜನರ ಜೀವಕ್ಕೆ ಕುತ್ತು ಬಾರದಿರಲಿ. ಪ್ರತಿ ವರ್ಷದಂತೆ ಈ ಬಾರಿಯೂ ರಕ್ತದಾನ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ, ಉಡುಪಿಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುತ್ತಿದ್ದರೂ ಎದೆಗುಂದದೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದ ಕೊರತೆಯುಂಟಾಗದಂತೆ ನೋಡಿಕೊಳ್ಳುತೇವೆ. ಆರೋಗ್ಯವಂತ ಯುವಕರು ಜಾತಿ ಮತ ಬೇದ ವಿಲ್ಲದೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಎಲ್ಲರೂ ಜೊತೆಯಾಗಿ ಕೊರೊನ ವಿರುದ್ದ ಹೊರಡೋಣ ಎಂದು ಕರೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವರಾಮ್ ಕೆ.ಎಂ., ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ.ಕೋಟ್ಯಾನ್, ಕೆಎಂಸಿ ರಕ್ತನಿಧಿ ವಿಭಾಗದ ವೈದ್ಯಾದಿಕಾರಿ ಡಾ.ಶಮ್ಮಿ ಶಾಸ್ತ್ರೀ, ಮೊಗವೀರ ಯುವ ಸಂಘಟನೆಯ ಮಾಜಿ ಜಿಲ್ಲಾಧ್ಯಕ್ಷರುಗಳಾದ ವಿನಯ್ ಕರ್ಕೇರ, ಸಂಜೀವ ಎಮ್.ಎಸ್,, ರಕ್ತದ ಆಪತ್ಬಂದವ ಸತೀಶ್ ಸಾಲ್ಯಾನ್ ಮಣಿಪಾಲ, ಮತ್ತು ಮೊಗವೀರ ಯುವ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮೊಗವೀರ ಯುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಹಿರಿಯಡ್ಕ ಸ್ವಾಗತಿಸಿದರು, ಪಾಂಡುರಂಗ ಬೈಂದೂರು ಧನ್ಯವಾದ ಸಮರ್ಪಿಸಿದರು.

Leave A Reply

Your email address will not be published.