ಧರ್ಮಸ್ಥಳ : ಸೌಜನ್ಯ ಮನೆಗೆ ಬಿವೈ ವಿಜಯೇಂದ್ರ ಭೇಟಿ : ಕೇಸರಿ ಪಾಳಯದಲ್ಲಿ ಮೊಳಗಿದೆ ಅಸಮಾಧಾನ

ಬೆಳ್ತಂಗಡಿ : ಸೌಜನ್ಯ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಹಾಗೂ ಬಿಜೆಪಿ ತಂಡ ಭೇಟಿ ನೀಡಿರುವುದು ಬಿಜೆಪಿಯ ಆಂತರಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಇಷ್ಟು ದಿನಗಳ ನಡೆಗೆ ಇದು ವಿರುದ್ಧವಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.

ಧರ್ಮಸ್ಥಳದ ಸೌಜನ್ಯ ಮನೆಗೆ ಭೇಟಿ ನೀಡಿದ ಬಿವೈ ವಿಜಯೇಂದ್ರ ಮತ್ತು ಟೀಂ, ಸುಪ್ರೀಂ ಕೋರ್ಟ್ ಒಪ್ಪಿದರೆ ಮರು ತನಿಖೆಗೆ ಬೇಕಾದ ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಆದರೆ ಸೌಜನ್ಯ ತಾಯಿ ಕುಸುಮಾವತಿ, ಮಹೇಶ್ ಶೆಟ್ಟಿ ತಿಮ್ಮರೋಡಿ ಟೀಂ ಜೊತೆ ಗುರುತಿಸಿಕೊಂಡಿದ್ದಾರೆ. ಬಿಜೆಪಿ ನಿಯೋಗದ ಈ ಭೇಟಿಯಿಂದ ಏನನ್ನು ಸಾಧಿಸಿದಂತಾಯ್ತು ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.
ಸೌಜನ್ಯ ಹತ್ಯೆಗೆ ನ್ಯಾಯ ಸಿಗಬೇಕೆಂಬುದು ಬಿಜೆಪಿಯ ಅಚಲ ನಿಲುವು. ಅದೇ ರೀತಿ ಧರ್ಮಸ್ಥಳ ದ ಪಾವಿತ್ರ್ಯಕ್ಕೆ ಧಕ್ಕೆಯಾಗಬಾರದೆಂಬುದೂ ಪ್ರಧಾನ ಹೋರಾಟವಾಗಿದೆ. ಬಿಜೆಪಿ ಈ ಹಿಂದೆ ಮರುತನಿಖೆಗೆ ಆಗ್ರಹಿಸಿದ್ದರೂ ಸೌಜನ್ಯ ಕುಟುಂಬ ವರ್ಗದ ನಿಲುವು ಬೇರೆಯೇ ಆಗಿತ್ತು. ಹೀಗಿರುವಾಗ ಬಿಜೆಪಿಯ ಹೋರಾಟ ಎರಡು ದೋಣಿಯ ಮೇಲೆ ಕಾಲಿಟ್ಟಂತಾಗುತ್ತದೆ.

ಬುರುಡೆ ಗ್ಯಾಂಗ್ ನ ಷಡ್ಯಂತ್ರದ ವಿರುದ್ಧ ನಡೆಸಬೇಕಾದ ಹೋರಾಟದ ದಾರಿಯನ್ನು ವಿಜಯೇಂದ್ರ ಆಂಡ್ ಟೀಂ ದಾರಿ ತಪ್ಪಿಸಿದೆ. ಈ ಭೇಟಿಯ ಬಗ್ಗೆ ಪಕ್ಷದ ವೇದಿಕೆ ಹಾಗೂ ಪ್ರಮುಖರ ಜತೆಗೆ ಚರ್ಚಿಸದೇ ಏಕಾಏಕಿ ನಿರ್ಧಾರ ಮಾಡುವ ಅಗತ್ಯವಿತ್ತೇ ? ಎಂಬ ಪ್ರಶ್ನೆ ಸಭೆ ಮುಕ್ತಾಯದ ಬೆನ್ನಲ್ಲೇ ಮೊಳಗಿದೆ.
ಧರ್ಮಸ್ಥಳದ ವಿರುದ್ದ ಷಡ್ಯಂತ್ರ ನಡೆಯುತ್ತಿದ್ದು, ಪ್ರಕರಣದ ತನಿಖೆಯನ್ನು ಎನ್ಐಎ ವಹಿಸುವಂತೆ ಆಗ್ರಹಿಸಿ, ಧರ್ಮಸ್ಥಳದ ಬಿಜೆಪಿ ಧರ್ಮಸ್ಥಳ ಚಲೋ ಹಾಗೂ ಬೃಹತ್ ಸಮಾವೇಶ ಆಯೋಜಿಸಿತ್ತು. ಇದರ ಬೆನ್ನಲ್ಲೇ ಬಿವೈ ವಿಜಯೇಂದ್ರ ಅವರು ಸೌಜನ್ಯ ಅವರ ಮನೆಗೆ ಭೇಟಿ ನೀಡಿದ್ದರು. ತಾಯಿ ಕುಸುಮಾವತಿ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಚಲೋ : ತಿಮರೋಡಿ, ಮಟ್ಟಣ್ಣ ಯಾರ ಕೂಸುಗಳು : ಪ್ರಿಯಾಂಕ ಖರ್ಗೆ



