BESCOM : ಬೆಂಗಳೂರಿನಲ್ಲಿ ಸಾವಿನ ಸರಣಿ : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಬೆಂಗಳೂರು : ಬೃಹತ್‌ ಬೆಂಗಳೂರಿನ ಹೊಣೆ ಹೊತ್ತ ಬಿಬಿಎಂಪಿ ಮತ್ತೆ ಮತ್ತೆ ತನ್ನ ಕರ್ತವ್ಯ ನಿರ್ವಹಣೆಯಲ್ಲಿ ಎಡವುತ್ತಲೇ ಇದೆ. ಇನ್ನೇನು ಮಳೆಗಾಲ ಆರಂಭಕ್ಕೆ ದಿನಗಣನೆ ನಡೆದಿದ್ದರೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದರ ಪರಿಣಾಮವಾಗಿ ಟ್ರಾನ್ಸಫಾರ್ಮರ್ ಗೆ ತಂದೆ ಮಗಳು ಬಲಿಯಾದ ಘಟನೆ ಮಾಸುವ ಮುನ್ನವೇ ನಗರದಲ್ಲಿ ಬೆಸ್ಕಾಂ ನಿರ್ಲಕ್ಷ್ಯಕ್ಕೆ(BESCOM) ಬಾಳಿ ಬದುಕ ಬೇಕಿದ್ದ ಯುವಕನೊಬ್ಬ ಪ್ರಾಣ ತೆತ್ತಿದ್ದಾನೆ.

ಬುಧವಾರ ಸಂಜೆ ವೇಳೆಗೆ ನಗರದಲ್ಲಿ ಅಕಾಲಿಕ ಮಳೆ ಸುರಿದಿದ್ದು ಈ ವೇಳೆ ಕಾಣಿಸಿಕೊಂಡ ಗಾಳಿಯ ಪರಿಣಾಮ ವಿದ್ಯುತ್ ಕಂಬದ ವೈರ್ ಹರಿದು ಬಿದ್ದಿದ್ದು ಇದು ತಾಗಿ ಯುವಕ ಸಾವನ್ನಪ್ಪಿದ್ದಾನೆ. ಮಂಗಮ್ಮನ್ನಪಾಳ್ಯ ನಿವಾಸಿ ವಸಂತ್ ( 21 ವರ್ಷ ) ಮೃತ ದುರ್ದೈವಿ. ವಸಂತ್ ದೀಪಾಂಜಲಿ‌ ನಗರದ ಮುಖ್ಯ ರಸ್ತೆಯಲ್ಲಿ ತಳ್ಳುಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ನಿನ್ನೆ ಸಂಜೆ ಗಾಳಿ ಮತ್ತು ಮಳೆ ಸುರಿದ ಪರಿಣಾಮ ಮರದ ಕೊಂಬೆ ತಾಗಿ ವೈರ್ ಕಟ್ ಆಗಿತ್ತು.ಕಟ್ ಆದ ವೈರ್ ಕೆಳಗೆ ಬಿದ್ದಿದ್ದು, ಕಂಬದ ಪಕ್ಕದಲ್ಲೇ ನಿಂತಿದ್ದ ವಸಂತನಿಗೆ ತಾಗಿತ್ತು.

ಕರೆಂಟ್ ಶಾಕ್ ಹೊಡೆದು ಕೆಳಬಿದ್ದಿದ್ದ ವಸಂತನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ವಸಂತ್ ಸಾವನ್ನಪ್ಪಿದ್ದಾನೆ. ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ (BESCOM ) ನಿರ್ಲಕ್ಯದಡಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆ ಬಗ್ಗೆ ವಸಂತ್ ತಾಯಿ ಜಯಲಕ್ಷ್ಮಮ್ಮ ಮಾತನಾಡಿದ್ದು, ನನ್ನ ಮಗನನ್ನ ಬಲಿ ತೆಗೆದುಕೊಂಡುಬಿಟ್ರು.ಒಬ್ಬನೇ ಮಗ,ಮನೆಗೆ ಆಧಾರವಾಗಿದ್ದ. ನೆನ್ನೆ ಮಧ್ಯಾಹ್ನ ಪೋನ್ ನಲ್ಲಿ ಮಾತಾಡಿದ್ದ. ಇವತ್ತು ಊರಲ್ಲಿ ಜಾತ್ರೆ ಇತ್ತು.ಹೋಗ್ಬೇಕಿತ್ತು. ಆದ್ರೆ ಮಗನ ಹೆಣದ ಜೊತೆಗೆ ಹೋಗುವಂತಾಯ್ತು.ಆ ರೆಂಬೆಗಳನ್ನ ಕಟಾವು ಮಾಡಿದ್ರೆ ಯಾವುದೇ ಸಮಸ್ಯೆ ಆಗ್ತಿರಲಿಲ್ಲ. ಮೊನ್ನೆಯಷ್ಟೇ ತಂದೆ ಮಗಳು ಸಜೀವ ದಹನವಾಗಿದ್ರು.ಆದ್ರೂ ಬೆಸ್ಕಾಂನವ್ರು ಎಚ್ಚೆತ್ತುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಹಣ್ಣು ವ್ಯಾಪಾರ ಮಾಡಿಕೊಂಡು ಕುಂತಿದ್ದವನ ಮೇಲೆ ಕಟ್ ಆಗಿ ವೈರ್ ಬಿದ್ದಿದೆ. ನಮಗೆ ಯಾರು ಗತಿ. ಈ ಬೆಸ್ಕಾಂನವ್ರು ಏನ್ ಮಾಡ್ತಿದ್ದಾರೆ‌. ಐದಾರು ವರ್ಷಗಳಿಂದ ಆ ಹಣ್ಣು ವ್ಯಾಪಾರದಲ್ಲೇ ಜೀವನವಿತ್ತು. ಈಗ ಮಗ ನಮ್ಮನ್ನ ಬಿಟ್ಟು ಹೋದ ಎಂದು ತಾಯಿ‌‌‌ ಜಯಲಕ್ಷಮ್ಮ ರೋಧಿಸುತ್ತಿದ್ದಾರೆ. ಮಳೆಗಾಲಕ್ಕೂ ಮುನ್ನ ಹಾಗೂ ಆಗಾಗ ನಗರದ ರಸ್ತೆ ಬದಿಯ ಮರಗಿಡಗಳು ಹಾಗೂ ವಿದ್ಯುತ್ ತಂತಿಗಳ ನಿರ್ವಹಣೆ ಜವಾಬ್ದಾರಿ ಬಿಬಿಎಂಪಿ ಮತ್ತು ಬೆಸ್ಕಾಂ ಮೇಲಿದೆ. ಆದರೆ ಇವೆರಡು ತಮ್ಮ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದು ಇದರಿಂದ ಜನಸಾಮಾನ್ಯರು ಹಾಗೂ ವಾಹನ ಸವಾರರು ಸಾವಿನ ಮನೆ ಸೇರುತ್ತಿದ್ದಾರೆ.

ಇದನ್ನೂ ಓದಿ : ಪ್ರಯಾಣಿಕರಿಗೆ ಶಾಕ್‌ ಕೊಟ್ಟ ಜೀವನಾಡಿ: ಬಿಎಂಟಿಸಿ ಬಸ್ ಟಿಕೇಟ್ ದರ‌ ಹೆಚ್ಚಳ

ಇದನ್ನೂ ಓದಿ :  ಪ್ರಯಾಣಿಕರಿಗೆ ಬರೆ ಎಳೆದ ನಮ್ಮ ಮೆಟ್ರೋ : ಹೆಚ್ಚಳವಾಯ್ತು ಪಾಸ್ ದರ

BESCOM Negligence boy death in Bangalore

Comments are closed.