ತರಕಾರಿಯಲ್ಲಿ ಪತ್ತೆಯಾಯ್ತು ವಿಷಕಾರಿ ಸೀಸದ ಅಂಶ : ಬೆಂಗಳೂರಿಗರೇ ಎಚ್ಚರ ಎಚ್ಚರ..!
ತರಕಾರಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ತಿಳಿದಿರುವ ವಿಚಾರ. ಆದರೆ ಈ ಮಾತಿಗೆ ಕಳಂಕ ತರುವಂತಹ ತರಕಾರಿಗಳು ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ. ಹೌದು..! ರಾಜ್ಯ ರಾಜಧಾನಿಯ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ವಿಷಕಾರಿ ಸೀಸದ ಅಂಶ ಇರುವುದು ಧೃಡಪಟ್ಟಿದೆ. ತೊಂಡೆಕಾಯಿ, ಬದನೆಕಾಯಿ ಹಾಗೂ ಚಪ್ಪರದ ಅವರೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೀಸದ ಅಂಶ ಪತ್ತೆಯಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಂಗಳೂರಿನ ವಿವಿಧ ಮಾರುಕಟ್ಟೆಗಳಿಂದ 72 ತರಕಾರಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಶೇಕಡಾ 26ರಷ್ಟು ಮಾದರಿಗಳಲ್ಲಿ ಸೀಸದ ಅಂಶ ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆಯಾಗಿದೆ.
ಬದನೆಕಾಯಿಯಲ್ಲಿ ನಿಗದಿತ ಪ್ರಮಾಣಕ್ಕಿಂತ 20 ಪಟ್ಟು, ತೊಂಡೆಕಾಯಿಯಲ್ಲಿ 18 ಪಟ್ಟು , ಅವರೆಕಾಯಿಯಲ್ಲಿ 9 ಪಟ್ಟು ಹಾಗೂ ಎಲೆಕೋಸು ಸೇರಿದಂತೆ ವಿವಿಧ ಸೊಪ್ಪುಗಳಲ್ಲಿ 5 ಪಟ್ಟು ಅಧಿಕ ವಿಷ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ತರಕಾರಿಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಲೋಹದ ಅಂಶ ಅಡಗಿದೆ ಎಂದು 2 ವರ್ಷಗಳ ಹಿಂದೆಯೆ ಎಚ್ಚರಿಕೆ ನೀಡಿತ್ತು.ಇದೀಗ ಈ ಅಂಶ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ವೈದ್ಯರ ಸಮರ : ಮಾರ್ಚ್ 11ರಂದು ರಾಜ್ಯಾದ್ಯಂತ ವೈದ್ಯರ ಮುಷ್ಕರ
ಇದು ಮಾತ್ರವಲ್ಲದೇ ಶುಂಠಿ, ದಪ್ಪ ಮೆಣಸಿನಕಾಯಿ, ಸೌತೆಕಾಯಿ ಹಾಗೂ ಮೆಣಸಿನಕಾಯಿಗಳಲ್ಲಿ ನಿಷೇಧಿತ ಮೊನೊಕ್ರೊಟೊಫಾಸ್ ರಾಸಾಯನಿಕ ಪತ್ತೆಯಾಗಿದೆ.
ಈ ರಾಸಾಯನಿಕಗಳು ಮಕ್ಕಳಿನ ಮಿದುಳಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿವೆ. ಅಲ್ಲದೇ ವಯಸ್ಕರಲ್ಲೂ ಕಿಡ್ನಿ ವೈಫಲ್ಯ, ಅಧಿಕ ರಕ್ತದೊತ್ತಡ ,ರಕ್ತಹೀನತೆ ಸೇರಿದಂತೆ ವಿವಿಧ ಗಂಭೀರ ಆರೋಗ್ಯ ಅಪಾಯಗಳು ಕಂಡುಬರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.



