ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದ ವೃದ್ದನ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಶಾಸಕ ಯು.ಟಿ.ಖಾದರ್ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದಿರುವುದು ಬೆಳಕಿಗೆ ಬಂದಿದೆ.
ನಿನ್ನೆಯಷ್ಟೇ 70 ವರ್ಷದ ವೃದ್ದ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಮಂಗಳೂರು ನಗರದ ಬೋಳಾರದಲ್ಲಿರುವ ಮಸೀದಿಯ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗಿತ್ತು. ಆರೋಗ್ಯ ಸಿಬ್ಬಂಧಿಗಳ ಜೊತೆ ಶಾಸಕ ಯು.ಟಿ.ಖಾದರ್ ಅವರು ಕೂಡ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.
ಅಂತ್ಯ ಸಂಸ್ಕಾರದ ವೇಳೆಯಲ್ಲಿ ತಾವೇ ಗುಂಡಿಯನ್ನು ತೆಗೆದು, ಮೃತ ದೇಹವನ್ನು ಗುಂಡಿಯಲ್ಲಿಟ್ಟು ಮಣ್ಣು ಮುಚ್ಚುವ ಕಾರ್ಯವನ್ನು ಮಾಡಿದ್ದಾರೆ. ಈ ಮೂಲಕ ಯು.ಟಿ.ಖಾದರ್ ಮಾನವೀಯತೆಯನ್ನು ಮೆರೆದಿದ್ದಾರೆ. ಆದರೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳು ಪಿಪಿಇ ಕಿಟ್ ಧರಿಸಿದ್ದರೂ ಕೂಡ ಶಾಸಕ ಯು.ಟಿ.ಖಾದರ್ ಅವರು ಮಾತ್ರ ಮುನ್ನೆಚ್ಚರಿಕೆಯನ್ನು ವಹಿಸಿರಲಿಲ್ಲ. ಅಲ್ಲದೇ ಪಿಪಿಇ ಕಿಟ್ ಧರಿಸದೆ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾರೆ.
ಆದರೆ ಈ ಬಗ್ಗೆ ಶಾಸಕ ಯು.ಟಿ.ಖಾದರ್ ಅವರಲ್ಲಿ ಕೇಳಿದ್ರೆ, ಕೊರೊನಾ ವೈರಸ್ ಸೋಂಕಿನಿಂದ ಜನರು ಭಯ ಭೀತರಾಗಿದ್ದಾರೆ. ಮೃತಪಟ್ಟ ತಂದೆಯ ಶವವನ್ನು ಪಡೆದುಕೊಳ್ಳಲು ಕೂಡ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಸೇವೆ ಮಾಡುವುದು ತನ್ನ ಕರ್ತವ್ಯ. ಮುಂದಿನ ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.