ತಿರುವನಂತಪುರ : ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ಕೇರಳದ ಚಿನ್ನದ ಕಳ್ಳಸಾಗಣೆ ಕೇಸ್ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಇದೀಗ ಕೇರಳ ಸಿಎಂ ಕುರ್ಚಿಗೆ ಕುತ್ತು ತಂದಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ನಿರ್ಧರಿಸಿದೆ. ಸ್ಪೀಕರ್ ವಿರುದ್ಧವೂ ನಿರ್ಣಯ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಯುಡಿಎಫ್ನ ಸಂಚಾಲಕ ಬೆನ್ನಿ ಹೆನನ್ ತಿಳಿಸಿದ್ದಾರೆ.
ಸ್ವಪ್ನಾ ಅವರಿಗೆ ಮುಖ್ಯಮಂತ್ರಿ ಕಾರ್ಯಾಲಯದಿಂದಲೂ ಬಾರೀ ಸಪೋರ್ಟ್ ಸಿಕ್ಕಿತ್ತು ಈ ಹಿನ್ನೆಲೆಯಲ್ಲಿಯೇ ಇಷ್ಟೊಂದು ದೊಡ್ಡ ಮಟ್ಟದ ಕಳ್ಳಸಾಗಣೆ ಮಾಡಲು ಸಾಧ್ಯವಾಗಿದೆ ಎನ್ನುವುದು ಯುಡಿಎಫ್ ಆರೋಪ.
ಇದೇ ಕಾರಣಕ್ಕೆ ಮುಖ್ಯಮಂತ್ರಿಗಳ ವಿರುದ್ದವೇ ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದಾರೆ. ಇನ್ನು ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಆರೋಪಿಯೋರ್ವರ ಜೊತೆಗೆ ಸ್ಪೀಕರ್ ಕೂಡ ಸಂಪರ್ಕ ಹೊಂದಿರುವುದು ಸ್ಪಷ್ಟವಾಗಿದೆ. ಹೀಗಾಗಿ ಅವರು ಕೂಡ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ಯುಡಿಎಫ್ ಆಗ್ರಹಿಸಿದೆ.
ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸ್ವಪ್ನ ಸುರೇಶ್ ಸೇರಿದಂತೆ ಆರೋಪಿಗಳನ್ನು ಎನ್ ಐಎ ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ. ಇನ್ನೊಂದೆಡೆ ಪ್ರಕರಣ ಪ್ರತಿಭಟನೆಯ ಸ್ವರೂಪವನ್ನು ಪಡೆದುಕೊಂಡಿದ್ದು, ಪ್ರಕರಣದ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪವೂ ರಾಜ್ಯ ಸರಕಾರದ ಮೇಲಿದೆ. ಈ ನಿಟ್ಟಿನಲ್ಲಿ ಯುಡಿಎಫ್ ಕೇರಳ ರಾಜ್ಯದಾದ್ಯಂತ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆಯನ್ನು ನೀಡಿದೆ.