ಯಮುನಾನಗರ/ಹರಿಯಾಣ : ದೇಶಾದ್ಯಂತ ನಿನ್ನೆ ವಿಜಯದಶಮಿಯನ್ನ ಸಂಭ್ರಮದಿಂದ ಆಚರಿಸಿದ್ದಾರೆ. ದೇಶದ ನಾನಾ ಭಾಗಗಳಲ್ಲಿ ಅದರಲ್ಲೂ ಉತ್ತರ ಭಾರತದಲ್ಲಿ ರಾವಣನ ಬೃಹತ್ ಪ್ರತಿಕೃತಿ ದಹಿಸಿ ವಿಜಯೋತ್ಸವವನ್ನ ಆಚರಿಸಿದ್ದಾರೆ. ಆದರೆ ಹರಿಯಾಣ ಯಮುನಾನಗರದಲ್ಲಿ ರಾವಣ ದಹನ (Ravan Dahan) ಕಾರ್ಯಕ್ರಮದ ವೇಳೆ ಅನಾಹುತ ವೊಂದು ನಡೆದಿದೆ.
ವಿಜಯದಶಮಿ ಹಿನ್ನೆಲೆಯಲ್ಲಿ ಯಮುನಾನಗರದಲ್ಲಿ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದಲ್ಲಿ ಬೆಂಕಿ ಹೊತ್ತಿಕೊಂಡಿದ್ದ ರಾವಣ ಪ್ರತಿಕೃತಿ ಜನರ ಮೇಲೆ ಬಿದ್ದು ಹಲವರು ಗಾಯಗೊಂಡ ಘಟನೆ ನಡೆದಿದೆ. ಅದೃಷ್ಟ ವಶಾತ್ ಭಾರಿ ಅನಾಹುತ ತಪ್ಪಿದೆ. ಧಗಧಗಿಸುತ್ತಿದ್ದ ರಾವಣನ ಪ್ರತಿಕೃತಿ ಜನರ ಮೇಲೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುತ್ತಿದೆ.
ಎಎನ್ಐ ಸುದ್ದಿ ಸಂಸ್ಥೆಯ ವಿಡಿಯೋದಲ್ಲಿ ಕಾಣುವಂತೆ, ಉರಿಯುತ್ತಿದ್ದ ರಾವಣನ ಪ್ರತಿಕೃತಿ ಬಳಿ ಜನರು ಓಡಿ ಹೋಗಿದ್ದಾರೆ. ರಾವಣನ ಪ್ರತಿಕೃತಿಯನ್ನ ಕೆಳಗೆ ಕೆಡವಲು ಯತ್ನಿಸಿದ್ದಾರೆ. ಆದ್ರೆ, ಹೊತ್ತಿ ಉರಿಯುತ್ತಿದ್ದ ರಾವಣನ ಪ್ರತಿಕೃತಿ ಏಕಾಏಕಿ ಕುಸಿದು ಜನರ ಮೇಲೆಯೇ ಬಿದ್ದಿದೆ. ಅಲ್ಲದೇ ರಾವಣನ ಪ್ರತಿಕೃತಿಯಲ್ಲಿ ಇರಿಸಲಾಗಿದ್ದ ಪಟಾಕಿಗಳು ಸಿಡಿಯಲಾರಂಭಿಸಿವೆ. ಪ್ರತಿಕೃತಿ ಕೆಳಗೆ ಬೀಳ್ತಿದ್ದಂತೆ ಆ ಬೆಂಕಿಯ ಮಧ್ಯೆ ಕೆಲವರು ಸಿಲುಕಿದ್ದಾರೆ. ಇನ್ನು ಕೆಲವರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಹಿಂದೂ ಪುರಾಣಗಳ ಪ್ರಕಾರ, ವಿಜಯದಶಮಿಯಂದೇ ಶ್ರೀರಾಮನು ರಾವಣನನ್ನು ಸಂಹರಿಸಿದ್ದ ಅನ್ನೋ ಪ್ರತೀತಿ ಇದೆ. ಹೀಗಾಗಿ ದುಷ್ಟ ಸಂಹಾರ ಮಾಡಿದ್ದಕ್ಕಾಗಿ ಪ್ರತಿ ವರ್ಷ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಹೀಗಾಗಿ ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ಹಲವೆಡೆ ರಾವಣ ದಹನ ನಡೆಯುತ್ತದೆ. ಸದ್ಯ ಹರಿಯಾಣದ ಯಮುನಾ ನಗರದಲ್ಲಿ ನಡೆದ ಈ ಅಗ್ನಿ ಅನಾಹುತ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಇದನ್ನೂ ಓದಿ : Cough Syrup : ಕೆಮ್ಮಿನ ಔಷಧ ಕುಡಿದು 66 ಮಕ್ಕಳ ಸಾವು.. ತನಿಖೆಗೆ ಮುಂದಾದ WHO
Ravan Dahan effigy of Ravana fell on the people gathered Yamunanagar Some people were injured
Comments are closed.