ಡಿಕೆ ಶಿವಕುಮಾರ್ ಪ್ರಮಾಣವಚನಕ್ಕೆ ಮುಹೂರ್ತ ನಿಗದಿ: ಹೊಸ ಸಚಿವ ಸಂಪುಟಕ್ಕೆ ಈ 10 ಜನ ಫಿಕ್ಸ್
ಮುಂದಿನ ಸೋಮವಾರ ಸಂಜೆ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜಕೀಯ ವಲಯದಿಂದ ತಿಳಿದುಬಂದಿದೆ.
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ದೊಡ್ಡ ನಾಯಕತ್ವ ಬದಲಾವಣೆಯಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಧಿಕಾರ ವಹಿಸಿಕೊಳ್ಳುವುದು ಈಗ ಬಹುತೇಕ ಖಚಿತವಾಗಿದೆ. ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ದಿನಾಂಕ ಕೂಡ ನಿಗದಿಯಾಗಿದೆ.
ಸೋಮವಾರ ಸಂಜೆ ಡಿಕೆಶಿ ಪ್ರಮಾಣವಚನ!
ಮುಂದಿನ ಸೋಮವಾರ ಸಂಜೆ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜಕೀಯ ವಲಯದಿಂದ ತಿಳಿದುಬಂದಿದೆ. ಇದಕ್ಕೂ ಮುನ್ನ ಅಂದು ಮಧ್ಯಾಹ್ನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆ ಕರೆಯಲಾಗಿದ್ದು, ಅಲ್ಲಿ ಡಿಕೆಶಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಅಧಿಕೃತವಾಗಿ ಆಯ್ಕೆ ಮಾಡಲಾಗುತ್ತದೆ.
ಡಿ.ಕೆ.ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಅವರ ಜೊತೆ ಹೊಸ ಸಂಪುಟ ಸೇರುವ ಸಚಿವರ ಪಟ್ಟಿ ತೀವ್ರ ಕುತೂಹಲ ಮೂಡಿಸಿದೆ. ಒಂದು ಮೂಲಗಳ ಪ್ರಕಾರ ಆರಂಭದಲ್ಲಿ ಕೇವಲ 7 ಹಿರಿಯ ಶಾಸಕರು ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದ್ದರೆ, ಹೈಕಮಾಂಡ್ ಹಸಿರು ನಿಶಾನೆ ನೀಡಿದರೆ ಒಟ್ಟು 10 ರಿಂದ 12 ಹಿರಿಯ ನಾಯಕರು ಮೊದಲ ಹಂತದಲ್ಲೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿರುವ ಪ್ರಮುಖ ನಾಯಕರು:
ಡಾ. ಜಿ. ಪರಮೇಶ್ವರ್
ಎಂ.ಬಿ. ಪಾಟೀಲ್
ಕೆ.ಜೆ. ಜಾರ್ಜ್
ಯು.ಟಿ. ಖಾದರ್
ಕೃಷ್ಣ ಬೈರೇಗೌಡ
ಪ್ರಿಯಾಂಕ್ ಖರ್ಗೆ
ಸತೀಶ್ ಜಾರಕಿಹೊಳಿ
ಈಶ್ವರ್ ಖಂಡ್ರೆ
ಎಚ್.ಕೆ. ಪಾಟೀಲ್
ರಾಮಲಿಂಗಾರೆಡ್ಡಿ
ಕೆ.ಎಚ್. ಮುನಿಯಪ್ಪ
ಮಂಕಾಳ್ ವೈದ್ಯ
ಹಾಲಿ ಸಚಿವರಾಗಿದ್ದ ಈ ನಾಯಕರನ್ನು ಮರು ಸೇರ್ಪಡೆ ಮಾಡಿಕೊಳ್ಳಲು ಡಿ.ಕೆ.ಶಿವಕುಮಾರ್ ಈಗಾಗಲೇ ಮನಸ್ಸು ಮಾಡಿದ್ದಾರೆ ಎನ್ನಲಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಮಟ್ಟದಲ್ಲಿ ಕಸರತ್ತು ಮುಂದುವರಿಸಿದ್ದಾರೆ.
ಇತ್ತ ಹಾಲಿ ಸ್ಪೀಕರ್ ಯು.ಟಿ. ಖಾದರ್ ಅವರು ಈ ಬಾರಿ ಸ್ಪೀಕರ್ ಸ್ಥಾನದಿಂದ ಕೆಳಗಿಳಿದು ಡಿಕೆಶಿ ಸಂಪುಟದಲ್ಲಿ ಸಚಿವರಾಗುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ. ಹಾಗಾಗಿ ತೆರವಾಗಲಿರುವ ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕರಾದ ದಿನೇಶ್ ಗುಂಡೂರಾವ್, ಎಚ್.ಕೆ. ಪಾಟೀಲ್ ಅಥವಾ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನು ಕಾಂಗ್ರೆಸ್ ವಲಯದಲ್ಲಿ ಗಂಭೀರವಾಗಿ ಚರ್ಚಿಸಲಾಗುತ್ತಿದೆ.
ಸೋಮವಾರ ಸಂಜೆಯೊಳಗೆ ಈ ಎಲ್ಲಾ ರಾಜಕೀಯ ಹೈಡ್ರಾಮಾಗಳಿಗೆ ಮತ್ತು ಸಚಿವರ ಪಟ್ಟಿಗೆ ಅಧಿಕೃತ ಮುದ್ರೆ ಬೀಳಲಿದ್ದು, ತಮ್ಮ ನೆಚ್ಚಿನ ನಾಯಕ ಸಿಎಂ ಆಗುತ್ತಿರುವುದಕ್ಕೆ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಹರಕೆಗಳನ್ನು ಸಲ್ಲಿಸುತ್ತಿದ್ದಾರೆ.



