ಬಿಹಾರದಲ್ಲಿ ಕಾಂಗ್ರೆಸ್​ಗೆ ಸೋಲಿನ ಕಹಿ ; ರಾಜ್ಯದಲ್ಲಿ ‘ನವೆಂಬರ್​ ಕ್ರಾಂತಿ’ಗೆ ತಿಲಾಂಜಲಿ

ಬಿಹಾರದಲ್ಲಿ ಗೆಲುವಿನ ಕನಸು ಕಾಣುತ್ತಿದ್ದ ಕಾಂಗ್ರೆಸ್​, ಬಿಜೆಪಿ ಹವಾ ಎದುರು ಧೂಳೀಪಟವಾಗಿದೆ. ಬಿಹಾರ ಚುನಾವಣೆಯ ಬಳಿಕ ರಾಜ್ಯದಲ್ಲಿ ಅಧಿಕಾರ ಬದಲಾವಣೆ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ನವೆಂಬರ್​ ಕ್ರಾಂತಿಗೆ ಕಾಂಗ್ರೆಸ್​ ಹೈಕಮಾಂಡ್​ ಬೀಗ ಹಾಕಿ ಸೈಲೆಂಟ್​ ಆಗಿ ಕುಳಿತಿದೆ ಎನ್ನಲಾಗಿದೆ.

ಕರ್ನಾಟಕ ಮಾದರಿಯಲ್ಲಿಯೇ ಗ್ಯಾರಂಟಿ ಯೋಜನೆಗಳ ಮೂಲಕವೇ ಗೆಲ್ಲಬಹುದು ಎಂದು ಕಾಂಗ್ರೆಸ್​ ನಿರೀಕ್ಷಿಸಿತ್ತು. ಆದರೆ ಈ ಬಾರಿ ಬಿಹಾರದಲ್ಲಿ ಜಾತಿ ಸಮೀಕರಣ ವರ್ಕ್​ ಆಗಿದೆ. ಯಾವ ಕ್ಷೇತ್ರದಲ್ಲಿ ಯಾವ ಸಮುದಾಯ ಜಾಸ್ತಿ ಪ್ರಮಾಣದಲ್ಲಿದೆ ಎಂದು ಅಳೆದು ತೂಗಿ ಈ ಬಾರಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಮೋದಿ ಮೋಡಿ, ನಿತೀಶ್​ ಕುಮಾರ್​ ಪ್ರಭಾವದ ಮುಂದೆ ಮಹಾಘಟಬಂಧನ್​ ಮಂಡಿಯೂರಿದೆ.

ಬಿಹಾರ ಚುನಾವಣೆಯ ಗೆಲುವಿನ ಬಳಿಕ ರಾಜ್ಯದಲ್ಲಿ ಸಿಎಂ ಸ್ಥಾನ ಡಿ.ಕೆ ಶಿವಕುಮಾರ್​ ಪಾಲಾಗುತ್ತೆ, ಸಂಪುಟ ಪುನರ್​ರಚನೆಯಾಗುತ್ತೆ ಎಂದೆಲ್ಲ ಹೇಳಲಾಗಿತ್ತು. ಆದರೆ ಬಿಹಾರದಲ್ಲಿ ಡಬಲ್​ ಡಿಜಿಟ್​ ತಲುಪಲೂ ಸಾಧ್ಯವಾಗದೇ ಮುಗ್ಗರಿಸಿದ ಕಾಂಗ್ರೆಸ್​, ಕರ್ನಾಟಕದಲ್ಲಿ ಹೊಸ ಪ್ರಯೋಗಕ್ಕೆ ಇಳಿಯುವ ಸಾಹಸ ಸದ್ಯ ಬೇಡ ಎಂದು ನಿರ್ಧರಿಸಿದೆ.

ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಅಥವಾ ಪುನರ್​ ರಚನೆ ಜೊತೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯನ್ನೂ ಎಐಸಿಸಿ ಮಾಡಬೇಕಿತ್ತು. ಆದರೆ ಇದೀಗ ಸೋಲಿನ ಕಹಿ ಬಳಿಕ ರಾಜ್ಯದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಹೈಕಮಾಂಡ್​ ನಿರ್ಧರಿಸಿದೆ. ಹೈಕಮಾಂಡ್​ನ ಈ ನಿರ್ಧಾರ ಅನೇಕ ಕಾಂಗ್ರೆಸ್​ ನಾಯಕರಿಗೆ ನಿರಾಶೆ ಮೂಡಿಸಿದೆ.

ಇದನ್ನೂ ಓದಿ: Separate State: ಕರ್ನಾಟಕ ವಿಭಜನೆಗೆ ಕಾಂಗ್ರೆಸ್ ಶಾಸಕರ ಬೆಂಬಲ; ಸಿಎಂಗೆ ಪತ್ರ

ಮೂಲಗಳ ಪ್ರಕಾರ ಬಿಹಾರ ಚುನಾವಣೆ ಗೆಲ್ಲಿಸಿಕೊಡುವ ಟಾಸ್ಕ್​ನ್ನು ಡಿಸಿಎಂ ಡಿ.ಕೆ ಶಿವಕುಮಾರ್​ಗೂ ನೀಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಾಸ್ತವ್ಯ ಹೂಡಿರುವ ಬಿಹಾರದ ಜನತೆಯ ವಿಶ್ವಾಸ ಗಳಿಸಲು ಡಿಕೆಶಿ ಕಸರತ್ತು ಮಾಡಿದ್ದರು. ನೀವು ಅಲ್ಲಿ ನಮ್ಮನ್ನು ಗೆಲ್ಲಿಸಿದರೆ ಇಲ್ಲಿ ನಾನು ಗೆಲ್ಲುತ್ತೇನೆ ಎಂಬರ್ಥದಲ್ಲಿಯೇ ಮಾತನಾಡಿದ್ದರು. ಆದರೆ ಬಿಹಾರದಲ್ಲಿ ಹೀನಾಯ ಸೋಲಿನ ಬಳಿಕ ಡಿ.ಕೆ ಶಿವಕುಮಾರ್​ ಸಿಎಂ ಖುರ್ಚಿಯ ಕನಸು ಕನಸಾಗಿಯೇ ಉಳಿಯುವ ಸಾಧ್ಯತೆಗಳು ದಟ್ಟವಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories