ಜೂ.18 ರಂದು ಯಡಿಯೂರಪ್ಪ ಭವಿಷ್ಯ ನಿರ್ಧಾರ ..!!! ನಾಯಕತ್ವ ಬದಲಾವಣೆಗೆ ಕ್ಲೈಮ್ಯಾಕ್ಸ್ ಹಾಡ್ತಾರಾ ಅರುಣ್ ಸಿಂಗ್

ಬೆಂಗಳೂರು : ಸಿಎಂ ಯಡಿಯೂರಪ್ಪ ಖುರ್ಚಿಯ ಮೇಲೆ ಇದೀಗ ತೂಗುಕತ್ತಿಯಾಡುತ್ತಿದೆ. ಯಡಿಯೂರಪ್ಪ ಪರ ಬೆಂಬಲಿಗರು ಬ್ಯಾಟಿಂಗ್ ಮಾಡುತ್ತಿದ್ರೂ ಕೂಡ ಅತೃಪ್ತರ ಒತ್ತಡಕ್ಕೆ ಹೈಕಮಾಂಡ್ ಮಣಿಯುವಂತೆ ಕಾಣುತ್ತಿದೆ. ಜೂನ್ 18ಕ್ಕೆ ಯಡಿಯೂರಪ್ಪ ಭವಿಷ್ಯ ನಿರ್ಧಾರವಾಗಲಿದೆ.

ಯಡಿಯೂರಪ್ಪ ವಿರುದ್ದ ತೊಡೆತಟ್ಟಿರುವ ರೆಬೆಲ್ ಶಾಸಕರು ಇದೀಗ ಸಿಎಂ ಯಡಿಯೂರಪ್ಪ ಬದಲಾವಣೆಗೆ ಬಿಗಿಪಟ್ಟು ಹಿಡಿಯುತ್ತಿದ್ದಂತೆಯೇ ಬಿಜೆಪಿ ಹೈಕಮಾಂಡ್ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಯಡಿಯೂರಪ್ಪ ಅವರಿಗೆ ಸೂಚನೆಯನ್ನು ನೀಡಿತ್ತು. ಆದ್ರೀಗ ರೆಬೆಲ್ ಶಾಸಕರು ಅರುಣ್ ಸಿಂಗ್ ಬದಲಾವಣೆಗೂ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಪ್ರತ್ಯೇಕವಾಗಿ ಎಲ್ಲಾ ಶಾಸಕರ ಜೊತೆಗೆ ಸಭೆ ನಡೆಸಲು ಅರುಣ್ ಸಿಂಗ್ ಮುಂದಾಗಿದ್ದಾರೆ.

ರಾಜ್ಯದ ಎಲ್ಲಾ ಬಿಜೆಪಿ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ ನಂತರದಲ್ಲಿ ಹೈಕಮಾಂಡ್ ಗೆ ವರದಿಯನ್ನು ಒಪ್ಪಿಸಲಿದ್ದಾರೆ. ಶೇ.50ರಷ್ಟು ಶಾಸಕರು ಯಡಿಯೂರಪ್ಪ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದ್ದು, ಜೂನ್ 18ಕ್ಕೆ ಯಡಿಯೂರಪ್ಪ ಭವಿಷ್ಯ ನಿರ್ಧಾರವಾಗಲಿದೆ.

ಈ ನಡುವಲ್ಲೇ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಈಗಾಗಲೇ ದೆಹಲಿಗೆ ಭೇಟಿ ನೀಡಿ ಬಿಜೆಪಿ ವರಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಕೇಂದ್ರ ನಾಯಕರು ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಗೌರವಯುತವಾಗಿ ಕೆಳಗಿಸುವುದಾಗಿ ತಿಳಿಸಿದ್ದು, ವಿಜಯೇಂದ್ರ ಅವರಿಗೆ ಪ್ರಮುಖ ಹುದ್ದೆ ನೀಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗುತ್ತಿದೆ.

Comments are closed.