Sehwag criticized Dinesh Karthik: “ಇದೇನು ಬೆಂಗಳೂರು ಪಿಚ್ ಅಲ್ಲ”, ದಿನೇಶ್ ಕಾರ್ತಿಕ್ ವಿರುದ್ಧ ಸೆಹ್ವಾಗ್ ಈ ರೀತಿ ಗುಡುಗಿದ್ದೇಕೆ ?

ಬೆಂಗಳೂರು: Sehwag criticized Dinesh Karthik : ಟಿ20 ವಿಶ್ವಕಪ್’ನಲ್ಲಿ (T20 World Cup 2022) ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸೋಲು ಕಾಣುತ್ತಿದ್ದಂತೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik)ವಿರುದ್ಧ ನಝಾಫ್’ಗಢದ ನವಾಬ ಖ್ಯಾತಿಯ ವೀರೇಂದ್ರ ಸೆಹ್ವಾಗ್ (Virender Sehwag) ಗುಡುಗಿದ್ದಾರೆ.

“ಇದೇನು ಬೆಂಗಳೂರು ಪಿಚ್ ಅಲ್ಲ, ದಿನೇಶ್ ಕಾರ್ತಿಕ್ ಯಾವಾಗ ಆಸ್ಟ್ರೇಲಿಯಾದಲ್ಲಿ ಆಡಿದ್ದಾರೆ” ಎಂದು ವೀರೂ ಅಬ್ಬರಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 49 ರನ್ನಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್’ಗಿಳಿದಿದ್ದ ದಿನೇಶ್ ಕಾರ್ತಿಕ್, ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಆಸರೆಯಾಗುವ ಬದಲು ಕೇವಲ 6 ರನ್ನಿಗೆ ಔಟಾಗಿದ್ದರು. ಒಂದು ತುದಿಯಲ್ಲಿ ಸೂರ್ಯಕುಮಾರ್ ಯಾದವ್ ಅಬ್ಬರಿಸುತ್ತಿದ್ದಾಗ, ಮತ್ತೊಂದು ತುದಿಯಲ್ಲಿ ಸ್ಟ್ರೈಕ್ ರೊಟೇಟ್ ಮಾಡಬೇಕಿದ್ದ ಡಿಕೆ, ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾಗಿದ್ದರು. ಅನುಭವಿ ಆಟಗಾರನಾಗಿದ್ದರೂ ತಂಡವನ್ನು ನಡು ನೀರಲ್ಲಿ ಕೈ ಬಿಟ್ಟಿದ್ದರು. ಇದು ವೀರೇಂದ್ರ ಸೆಹ್ವಾಗ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ (Rishabh Pant) ಅವರನ್ನು ಆಡಿಸದೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತಪ್ಪು ಮಾಡುತ್ತಿದೆ ಎಂದು ವೀರೂ ಗುಡುಗಿದ್ದಾರೆ. “ರಿಷಭ್ ಪಂತ್ ಅವರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನಾಡಿದ ಅನುಭವವಿದೆ ಮತ್ತು ಅಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ದಿನೇಶ್ ಕಾರ್ತಿಕ್ ಆಸ್ಟ್ರೇಲಿಯಾದಲ್ಲಿ ಯಾವಾಗ ಆಡಿದ್ದಾರೆ. ಇದೇನು ಬೆಂಗಳೂರು ಪಿಚ್ ಅಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ದೀಪಕ್ ಹೂಡ ಬದಲು ರಿಷಭ್ ಪಂತ್ ತಂಡದಲ್ಲಿರಬೇಕಿತ್ತು” ಎಂದು ಸೆಹ್ವಾಗ್ ಹೇಳಿದ್ದಾರೆ.

37 ವರ್ಷದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಕೇವಲ 1 ರನ್ ಗಳಿಸಿ ಔಟಾಗಿದ್ದರು. ಸತತ ಎರಡು ಪಂದ್ಯಗಳಲ್ಲಿ ವಿಫಲರಾಗಿರುವ ಡಿಕೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೆನ್ನು ನೋವಿನ ಕಾರಣ ಮೈದಾನ ತೊರೆದಿದ್ದರು. ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ವಿಕೆಟ್ ಕೀಪಿಂಗ್ ನಡೆಸಿದ್ದರು. ಪರ್ತ್’ನ ವಾಕಾ ಮೈದಾನದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್’ಗಳಿಂದ ಸೋಲುಂಡಿರುವ ಭಾರತ, ಸೆಮಿಫೈನಲ್ ಪ್ರವೇಶಿಸಬೇಕಾದರೆ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಒಂದು ಪಂದ್ಯ ಸೋತರೂ ಸೆಮಿಫೈನಲ್ ಸ್ಥಾನಕ್ಕಾಗಿ ರನ್’ರೇಟ್ ಮೊರೆ ಹೋಗಬೇಕಾಗುತ್ತದೆ. ಟಿ20 ವಿಶ್ವಕಪ್’ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಎರಡನ್ನು ಗೆದ್ದು ಒಂದರಲ್ಲಿ ಸೋತಿರುವ ಭಾರತ ಗ್ರೂಪ್-2ರ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 3 ಪಂದ್ಯಗಳಿಂದ 5 ಅಂಕ ಗಳಿಸಿರುವ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ. ಅಡಿಲೇಡ್ ಮೈದಾನದಲ್ಲಿ ಬುಧವಾರ (ನವೆಂಬರ್ 2) ನಡೆಯುವ ಸೂಪರ್-12 ಹಂತದ ತನ್ನ 4ನೇ ಲೀಗ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಭಾನುವಾರ (ನವೆಂಬರ್ 6) ನಡೆಯುವ ಅಂತಿಮ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಜಿಂಬಾಬ್ವೆ ವಿರುದ್ಧ ಆಡಲಿದೆ.

ಇದನ್ನೂ ಓದಿ : India Cricket Team : ಕಿವೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ: ಶಿಖರ್, ಪಾಂಡ್ಯ ಕ್ಯಾಪ್ಟನ್, ರಿಷಬ್ ವೈಸ್ ಕ್ಯಾಪ್ಟನ್

ಇದನ್ನೂ ಓದಿ : India Cricket Team : ಕಿವೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ: ಶಿಖರ್, ಪಾಂಡ್ಯ ಕ್ಯಾಪ್ಟನ್, ರಿಷಬ್ ವೈಸ್ ಕ್ಯಾಪ್ಟನ್

Virender Sehwag criticized Dinesh Karthik t20 world cup 2022

Comments are closed.