BJ Puttaswamy : ಬಿ.ಜೆ.ಪುಟ್ಟಸ್ವಾಮಿ ಇನ್ನೂ ಗಾಣಿಗರ ಮಹಾಸ್ವಾಮಿ : ಇಳಿವಯಸ್ಸಿನಲ್ಲಿ ಸನ್ಯಾಸದ ಮೊರೆ ಹೋದ ಮಾಜಿ ಸಚಿವ
ಬೆಂಗಳೂರು : ಇಳಿ ವಯಸ್ಸಿನಲ್ಲಿ ವಾನಪ್ರಸ್ಥಾಶ್ರಮ ಸ್ವೀಕರಿಸಬೇಕು ಅನ್ನೋ ಮಾತಿದೆ. ಈ ಮಾತಿಗೆ ಬಲಕೊಡುವಂತೆ ಮಾಜಿ ಸಚಿವ, ಯೋಜನಾ ಅಯೋಗದ ಮಾಜಿ ಉಪಾಧ್ಯಕ್ಷ, ಬಿಜೆಪಿ ಹಿರಿಯ ನಾಯಕ ಬಿ.ಜೆ.ಪುಟ್ಟಸ್ವಾಮಿ ಇಳಿವಯಸ್ಸಿನಲ್ಲಿ ಖಾದಿ ಬಿಟ್ಟು ಖಾವಿ ತೊಡಲು ಹೊರಟಿದ್ದಾರೆ. ಹೌದು ಬಿಜೆಪಿ (Bjp ) ತೊರೆದ ಬಿ.ಜೆ.ಪುಟ್ಟಸ್ವಾಮಿ ( BJ Puttaswamy ) ತಮ್ಮ 82 ನೇ ವಯಸ್ಸಿ ನಲ್ಲಿ ಸ್ವಾಮೀಜಿಯಾಗಿ ಪಟ್ಟಾಭಿಷೇಕ ಮಾಡಿಸಿಕೊಳ್ಳಲು ಸಜ್ಜಾಗಿದ್ದಾರೆ. ಮಾಜಿ ಸಿಎಂ ಬಿಎಸ್ವೈ ಅತ್ಯಾಪ್ತರಾಗಿದ್ದ ಬಿ.ಜೆ.ಪುಟ್ಟಸ್ವಾಮಿ ಈಗ ರಾಜಕೀಯ ಹಾಗೂ ಕೌಟುಂಬಿಕ ಬದುಕು ಎರಡನ್ನೂ ಬಿಟ್ಟು ಸನ್ಯಾಸಿಯಾಗಿ ಪಟ್ಟಕ್ಕೇರಲಿದ್ದಾರೆ. ಗಾಣಿಗ ಸಮುದಾಯದ ಮೊದಲ ಸ್ವಾಮೀಜಿಯಾಗಿ ಅಂದ್ರೇ ಪೀಠಾಧಿಪತಿಯಾಗಿ ಬಿ.ಜೆ.ಪುಟ್ಟಸ್ವಾಮಿ ಪೀಠಾರೋಹಣಗೊಳ್ಳಲಿದ್ದಾರೆ.
ಈ ಬಗ್ಗೆ ಗಾಣಿಗ ಸಮುದಾಯದಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಇದುವರೆಗೂ ಗಾಣಿಗ ಸಮುದಾಯಕ್ಕೆ ಯಾವುದೇ ಗುರುಪೀಠ ಇರುವುದಿಲ್ಲ. ಬೆಂಗಳೂರಿನ ರಾಜರಾಜೇಶ್ವರಿ ಪೀಠದ ಕೈಲಾಸ ಆಶ್ರಮದ ಪೀಠಾಧಿಪತಿಗಳಾದ ಶ್ರೀಶ್ರೀಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳವರು ಧ್ಯಾನಾಸಕ್ತರಾದ ಸಂದರ್ಭದಲ್ಲಿ ಜಗನ್ಮಾತೆ ರಾಜರಾಜೇಶ್ವರಿ ಅಮ್ಮನವರು ಪ್ರೇರಣೆ ನೀಡಿ ಶ್ರೀ ಬಿ.ಜೆ.ಪುಟ್ಟಸ್ವಾಮಿಯವರನ್ನು ಗಾಣಿಗ ಸಮುದಾಯದ ಪೀಠಾಧಿಪತಿಗಳನ್ನಾಗಿ ನೇಮಿಸಲು ಅನುಗ್ರಹವಾಗಿದೆ ಎಂದು ವಿವರಣೆ ನೀಡಿದೆ.
ಅಲ್ಲದೇ, ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠ ಬೆಂಗಳೂರು ಇದರ ಪ್ರಥಮ ಪೀಠಾಧಿಪತಿಗಳಾಗಿ ಬಿ.ಜೆ.ಪುಟ್ಟ ಸ್ವಾಮಿಯವರು ಮೇ 15 ರಂದು ಪಟ್ಟಾಭಿಷೇಕ ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದೆ. ಈ ಮಧ್ಯೆ ಬಿ.ಜೆ.ಪುಟ್ಟಸ್ವಾಮಿ ಕೂಡ ಈ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದು ತಾವು ಸನ್ಯಾಸ ಸ್ವೀಕರಿಸುವ ಸಮಾರಂಭಕ್ಕೆ ರಾಜಕೀಯ ನಾಯಕರನ್ನು ಆಹ್ವಾನಿಸುವುದರಲ್ಲಿ ನಿರತರಾಗಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ನಾಯಕರಿಗೆ ಬಿ.ಜೆ.ಪುಟ್ಟಸ್ವಾಮಿಯವರು ಸ್ವತಃ ತಾವೇ ತೆರಳಿ ಆಹ್ವಾನ ನೀಡುತ್ತಿದ್ದಾರೆ. ಸನ್ಯಾಸ ಸ್ವೀಕರಿಸಿದ ಬಳಿಕ ಬಿ.ಜೆ.ಪುಟ್ಟಸ್ವಾಮಿಯವರ ಹೆಸರು ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳು ಎಂದು ನಾಮಕರಣ ಮಾಡಲಾಗುತ್ತದೆ. ನೆಲಮಂಗಲದಲ್ಲಿರೋ ಗಾಣಿಗರ ಮಠದಲ್ಲಿ ಈ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಇದನ್ನೂ ಓದಿ : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್
ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಿ.ಜೆ.ಪುಟ್ಟಸ್ವಾಮಿ ಬಿಎಸ್ವೈ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಬಳಿಕ ಯಡಿಯೂರಪ್ಪನವರ ಜೊತೆಗೆ ಕೆಜಿಪಿಗೆ ಹೋಗಿ ತಮ್ಮ ಪರಿಷತ್ ಸ್ಥಾನ ಕಳೆದುಕೊಂಡಿದ್ದರು. ಹಾವೇರಿಯಲ್ಲಿ ನಡೆದ ಕೆಜಿಪಿ ಯಾತ್ರೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿತ್ತು. ಇತ್ತೀಚಿಗೆ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಬಿ.ಜೆ.ಪುಟ್ಟಸ್ವಾಮಿ ಈಗ ರಾಜಕೀಯದಿಂದ ಸನ್ಯಾಸಕ್ಕೆ ಹೊರಳಿದ್ದು ಬಿಜೆಪು ಈ ಬದಲಾವಣೆಯನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಅಲ್ಲದೇ ಇದು ಬಿಜೆಪಿ ಗೆ ಮಗ ಸೆಳೆಯಲು ನೆರವಾಗುತ್ತಾ ಅನ್ನೋ ಚರ್ಚೆಯೂ ಆರಂಭಗೊಂಡಿದೆ. ಇದನ್ನೂ ಓದಿ : ಶ್ರೀರಾಮನಿಗೆ ಅಪಚಾರ ಮಾಡಬೇಡಿ ಎಂದ ಹೆಚ್.ಡಿ.ಕುಮಾರಸ್ವಾಮಿ
Bjp Senior Leader BJ Puttaswamy Quits Politics to Became Swamiji
Comments are closed.