ಸಂಕ್ರಾಂತಿ ಹಬ್ಬಕ್ಕೆ ಭಾರತೀಯ ರೈಲ್ವೆ ಇಲಾಖೆಯಿಂದ ಬಂಪರ್ ಗಿಫ್ಟ್ : ಬೆಂಗಳೂರಿನಿಂದ ವಿಶೇಷ ರೈಲು ಸೌಲಭ್ಯ
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿಗೆ ತೆರಳುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಬಸ್ ಟಿಕೆಟ್ ದರ ಗಗನಕ್ಕೆ ಏರಿರುವ ಬೆನ್ನಲ್ಲೇ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಸಂಕ್ರಾಂತಿ ಗಿಫ್ಟ್ ಕೊಟ್ಟಿದೆ.
ಬೆಂಗಳೂರಿನಿಂದ ಶಿವಮೊಗ್ಗದ ತಾಳಗುಪ್ಪ, ಗೋವಾದ ಮಡ್ಗಾಂವ್ ಮತ್ತು ಕೇರಳದ ಕಣ್ಣೂರು ಹಾಗೂ ಕೊಲ್ಲಂಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ.
ಮಲೆನಾಡು ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಯಶವಂತಪುರದಿಂದ ತಾಳಗುಪ್ಪಕ್ಕೆ 2 ವಿಶೇಷ ರೈಲು ಸಂಚರಿಸಲಿದೆ. 06585 ಸಂಖ್ಯೆಯ ಯಶವಂತಪುರ ತಾಳಗುಪ್ಪ ಎಕ್ಸ್ಪ್ರೆಸ್ ವಿಶೇಷ ರೈಲು ಜನವರಿ 13 ಮತ್ತು ಜನವರಿ 23 ರಂದು ರಾತ್ರಿ 10:45 ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 04:45 ಕ್ಕೆ ತಾಳಗುಪ್ಪ ತಲುಪಲಿದೆ.
ಜನವರಿ 14 ಮತ್ತು ಜನವರಿ 24 ರಂದು ಬೆಳಿಗ್ಗೆ 10:00 ಗಂಟೆಗೆ ತಾಳಗುಪ್ಪದಿಂದ ಹೊರಟು ಅದೇ ದಿನ ಸಂಜೆ 05:15 ಕ್ಕೆ ಯಶವಂತಪುರ ತಲುಪಲಿದೆ. ಈ ರೈಲುಗಳು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.
ಇದನ್ನೂ ಓದಿ: ಕರಾವಳಿ ಭಾಗದ ಜನತೆಗೆ ಗುಡ್ನ್ಯೂಸ್.. ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ಪ್ರೆಸ್
ಇನ್ನು ಕರಾವಳಿ ಭಾಗದ ಜನತೆಯ ಅನುಕೂಲಕ್ಕಾಗಿ ಯಶವಂತಪುರ ಮಡ್ಗಾಂವ್ ನಡುವೆ ವಿಶೇಷ ರೈಲು ಓಡಲಿದೆ. 06287 ಸಂಖ್ಯೆಯ ಯಶವಂತಪುರ ಮಡ್ಗಾಂವ್ ಎಕ್ಸ್ಪ್ರೆಸ್ ಜನವರಿ 13 ಮತ್ತು 23 ರಂದು ಯಶವಂತಪುರದಿಂದ ಬೆಳಿಗ್ಗೆ 11:50 ಕ್ಕೆ ಹೊರಟು ಮರುದಿನ ಬೆಳಿಗ್ಗೆ 06:45 ಕ್ಕೆ ಮಡ್ಗಾಂವ್ ತಲುಪಲಿದೆ.ಜನವರಿ 18 ಮತ್ತು 26 ರಂದು ಮಡ್ಗಾಂವ್ನಿಂದ ಬೆಳಿಗ್ಗೆ 11:00 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 04:45 ಕ್ಕೆ ಯಶವಂತಪುರ ತಲುಪಲಿದೆ. ಈ ರೈಲು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಪುತ್ತೂರು, ಬಂಟ್ವಾಳ, ಸುರತ್ಕಲ್, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಮುರುಡೇಶ್ವರ, ಹೊನ್ನಾವರ, ಗೋಕರ್ಣ ಮತ್ತು ಕಾರವಾರ ಮಾರ್ಗವಾಗಿ ಸಂಚರಿಸಲಿದೆ.
ಇನ್ನು ಪೊಂಗಲ್ ಹಬ್ಬ ಕೇರಳದ ಅತ್ಯಂತ ಪ್ರಮುಖ ಹಬ್ಬವಾಗಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳುವವರಿಗಾಗಿಯೂ ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಬೆಂಗಳೂರು ಕಂಟೋನ್ಮೆಂಟ್ ಮತ್ತು ಕಣ್ಣೂರು ನಡುವೆ ಜನವರಿ 9 ಮತ್ತು 13 ರಂದು ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪಾಲಕ್ಕಾಡ್ ಮತ್ತು ಕೋಝಿಕ್ಕೋಡ್ ಮಾರ್ಗವಾಗಿ ಸಂಚರಿಸಲಿವೆ.



