ಕೋಗಿಲು ಬಡಾವಣೆ ನಿವಾಸಿಗಳಿಗೆ ಮನೆ ಹಸ್ತಾಂತರ 1 ದಿನ ವಿಳಂಬ : ಸಚಿವ ಜಮೀರ್ ಅಹಮದ್ ಖಾನ್
ಬೆಂಗಳೂರು ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ವಾಸವಿದ್ದ ಕುಟುಂಬಗಳಿಗೆ ಮನೆ ತೆರವು ಮಾಡಿದ ಬಳಿಕ ಇದೀಗ ಹೊಸ ಮನೆಯನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಘೋಷಣೆಯಂತೆ ಇಂದು ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡಬೇಕಿತ್ತು. ಆದರೆ ದಾಖಲೆಗಳ ಪರಿಶೀಲನೆಯ ಅಗತ್ಯ ಇರೋದ್ರಿಂದ ಒಂದು ದಿನ ತಡವಾಗಿ ಅಂದರೆ ನಾಳೆ ಮನೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಕೋಗಿಲು ಬಡಾವಣೆ ನಿವಾಸಿಗಳು ನಿರಾಶ್ರಿತರಾದ ಬಗ್ಗೆ ಕೇರಳದಿಂದ ರಾಜಕೀಯ ಒತ್ತಡ ಬಂದ ಬಳಿಕ ಈ ನಿವಾಸಿಗಳ ಹಿತ ಕಾಯುವಂತೆ ರಾಜ್ಯ ಸರ್ಕಾರಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೂಚನೆ ನೀಡಿದ್ದರು. ಇದಾದ ಬಳಿಕ ತುರ್ತು ಸಭೆ ಕರೆದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ರಾಜೀವ್ ಗಾಂಧಿ ವಸತಿ ನಿಗಮದಿಂದ ಬೈಯ್ಯಪ್ಪನಹಳ್ಳಿ ಬಳಿ ನಿರ್ಮಿಸಿರುವ ವಸತಿ ಸಂಕೀರ್ಣದಲ್ಲಿ ಈ ಸಂತ್ರಸ್ತರಿಗೆ ಸೂರು ಕಲ್ಪಿಸುವ ತೀರ್ಮಾನಕ್ಕೆ ಬಂದಿದ್ದರು.
ಇನ್ನು ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ಅಕ್ರಮವಾಗಿ ವಾಸವಾಗಿದ್ದವರಿಗೆ ಕನ್ನಡಿಗರ ಜಾಗದಲ್ಲಿ ಇದೀಗ ಸಕ್ರಮವಾಗಿಯೇ ಮನೆ ನಿರ್ಮಿಸಿಕೊಡುವ ಕೆಲಸವನ್ನ ಈ ಟೋಪಿ ಸರ್ಕಾರ ಮಾಡುತ್ತಿದೆ. ಈ ಮೂಲಕ ಬೆಂಗಳೂರನ್ನು ಮಿನಿ ಬಾಂಗ್ಲಾ ದೇಶ ಮಾಡಲಾಗುತ್ತಿದೆ. ಈ ಮೂಲಕ ಕನ್ನಡಿಗರ ಕೈಗೆ ಚಿಪ್ಪು ಕೊಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ನಶೆಯಲ್ಲಿ ಮಿಂದೆದ್ದ ಸಿಲಿಕಾನ್ ಸಿಟಿ ಮಂದಿ : ಖಾಕಿ ಸುಸ್ತೋ ಸುಸ್ತು
ಅಲ್ಲದೇ ಯಲಹಂಕ ಬಳಿಯ ಕೋಗಿಲು ಬಡಾವಣೆಗೆ ಅಶೋಕ್ ನೇತೃತ್ವದಲ್ಲಿ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತಿತರ ಪ್ರಮುಖರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್, ಗೂಗಲ್ ಮ್ಯಾಪ್ನ ಅಡಿಯಲ್ಲಿ 1 ವರ್ಷದ ಹಿಂದೆ ಇಲ್ಲಿ ಮನೆಯೇ ಇರಲಿಲ್ಲ. ಕೇವಲ 6 ತಿಂಗಳ ಅವಧಿಯಲ್ಲಿ ಅಕ್ರಮ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಹೇಗೆ ಸಿಕ್ಕಿತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನೆರೆಯಿಂದ ಮನೆ ಕಳೆದುಕೊಂಡ ಅನೇಕರು ರೈತರು ನಮ್ಮ ನಡುವೆ ಇದ್ದಾರೆ. ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಕಟ್ಟಡ ವ್ಯವಸ್ಥೆ ಇಲ್ಲ. ಆದರೆ ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಲ್ಳದ ರಾಜ್ಯ ಸರ್ಕಾರ ಮತ ಬ್ಯಾಂಕ್ಗಾಗಿ ಕನ್ನಡಿಗರ ಜಾಗವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.



