ಸ್ವರ್ಣ ನೂಪುರ 3ನೇ ವಾರ್ಷಿಕೋತ್ಸವ : ಯಕ್ಷ ಕಿನ್ನರ ಸಂಭ್ರಮ 2025

ಕುಂದಾಪುರ : ಸ್ವರ್ಣನೂಪುರ ಯಕ್ಷಗಾನ ಕಲಾ ಮಂಡಳಿ (Swarnupura Yakshagana Mandali) ಯ ಮೂರನೆಯ ವಾರ್ಷಿಕೋತ್ಸವ ಯಕ್ಷ ಕಿನ್ನರ ಸಂಭ್ರಮ – ರಂಗ ತಾರ ಚಂದ್ರಮ ಅದ್ದೂರಿಯಾಗಿ ನಡೆಯಿತು. ಕುಂದಾಪುರದ ಹಂಗಳೂರಿನ ಶ್ರೀ ಶನೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ವರ್ಣರಂಜಿತವಾಗಿ ನೆರವೇರಿತು.

ಕುಂದಾಪುರದ ಸ್ವರ್ಣನೂಪುರ ಯಕ್ಷಗಾನ ಮಂಡಳಿಯ ಸಂಸ್ಥಾಪಕರಾದ ಗಣೇಶ್ ಗುನಗಾ ಅವರು, ಪ್ರಸ್ತಾವಿಕ ಭಾಷಣ ಮಾಡಿದ್ರು. ತಮ್ಮ ಕನಸಿಗೆ ಜೀವ ತುಂಬಿದ ಹೆತ್ತವರು, ಮಡದಿ, ಕುಟುಂಬದವರು, ಗುರು ವಿಘ್ನೇಶ್ ದೇವಾಡಿಗ ಮತ್ತು ಮಕ್ಕಳೇ ತಮ್ಮ ಜೀವಾಳ ಎಂದು ಭಾವುಕರಾಗಿ ನುಡಿದರು.

ಸಭಾಧ್ಯಕ್ಷತೆವಹಿಸಿದ್ದ ಉಡುಪಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶ್ರೀಕಾಂತ್ ಗುನಗಾ ಅವರು, ಯಕ್ಷಗಾನ ಕಲಾವಿದರಿಗೆ ಪೌರಾಣಿಕ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರನ್ನು ಮೈ ನವಿರೇಳಿಸುವ ಅದ್ಭುತ ಶಕ್ತಿ ಭಗವಂತನ ಕೊಡುಗೆ ಎಂದು ಹೆಮ್ಮೆಯಿಂದ ನುಡಿದರು.

ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿದ ಕುಂದಾಪುರದ ಆದರ್ಶ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಆದರ್ಶ ಹೆಬ್ಬಾರ್ ಅವರು ಮಾತನಾಡಿದ್ರು.
ಯಕ್ಷಗಾನವು ಮಕ್ಕಳಲ್ಲಿ ಕನ್ನಡ ಸಾಹಿತ್ಯ ಸಂಪನ್ನತೆ ಮತ್ತು ಪುರಾಣ ಪುಣ್ಯ ಕಥೆಗಳ ಧನಾತ್ಮಕ ಜ್ಞಾನವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.
ಇದನ್ನೂ ಓದಿ : ಸಾಸ್ತಾನ : ಮನೆ ಕೆಲಸದಾಕೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಹಣ ಕಳವು
Swarnupura Yakshagana Mandali : ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ
ಶಿಕ್ಷಕರು, ಹವ್ಯಾಸಿ ಭಾಗವತರಾದ ಕಂಚಿನ ಕಂಠದ ರಾಜೇಶ್ ಕರ್ಕೇರಾ ದಂಪತಿ ಕೋಡಿಕನ್ಯಾನ ಇವರಿಗೆ “ಸ್ವರ್ಣ ನೂಪುರ ಪ್ರಶಸ್ತಿ 2025” ಪ್ರದಾನ ಮಾಡಲಾಯಿತು.
ಸತತವಾಗಿ ಸ್ವರ್ಣ ನೂಪುರದ ಭಾಗವತೆಯಾಗಿ ಜನಪ್ರಿಯತೆ ಗಳಿಸಿರುವ ಸುಶ್ರಾವ್ಯ ಕಂಠದ ಕುಮಾರಿ ಪೂಜಾ ಅವರಿಗೆ ಅವರ ತಂದೆಯವರೇ ಪೇಟ ಕಟ್ಟುವುದರ ಮೂಲಕ ಕುಟುಂಬ ಸಮ್ಮಿಳಿತದ ‘ಸ್ವರ್ಣ ಗಾನವಿ’ ಬಿರುದನ್ನಿತ್ತು ಗೌರವಿಸಿದರು.

ಸ್ವರ್ಣ ನೂಪುರದ ಎಲ್ಲಾ ಕಾರ್ಯಗಳಲ್ಲಿ ಹೆಗಲುಕೊಟ್ಟು ಬೆಂಬಲ ನೀಡಿದ ಶ್ರೀಯುತ ಕೇಶವ ಕೈಪಾಡಿ ದಂಪತಿಗಳನ್ನು ಅಭಿನಂದಿಸಲಾಯಿತು.
ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ‘ಏಕಮೇವ ಅದ್ವಿತೀಯ’ ಕಲಾವಿದರೂ, ಯಕ್ಷನಕ್ಷತ್ರ ಕಿರಾಡಿ ಟ್ರಸ್ಟ್ನ ಪ್ರವರ್ತಕರೂ, ಕಾರ್ಯಕ್ರಮದ ಮುಖ್ಯ ಅತಿಥಿ ಪ್ರಕಾಶ್ ಮೊಗವೀರ ಕಿರಾಡಿ ಅವರಿಗೆ ‘ಧವಳ ಗೆಜ್ಜೆ’ ನೀಡುವುದರ ಮೂಲಕ ಗೌರವಿಸಲಾಯಿತು.
ಇದನ್ನೂ ಓದಿ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಣ ರೈತರ ಖಾತೆಗೆ ಜಮೆ ಆಗಿದ್ಯಾ ? ಚೆಕ್ ಮಾಡುವುದು ಹೇಗೆ
ಯಕ್ಷಗಾನದ ಶಂಖನಾದ ಮೊಳಗುವ ನೆಲದಲ್ಲಿ ಅನಾಥಾಶ್ರಮಗಳು, ವೃದ್ಧಾಶ್ರಮಗಳು ತಲೆ ಎತ್ತುವ ಸಾಧ್ಯತೆ ಕಡಿಮೆ ಎಂಬ ಸತ್ಯವನ್ನು ಒತ್ತಿ ಹೇಳಿದರು.

Swarnupura Yakshagana Mandali : ಗುರು ವಂದನೆ ಮತ್ತು ಅಭಿನಂದನೆ :
ಕಾರ್ಯಕ್ರಮದ ರೂವಾರಿಯಾದ ಗಣೇಶ ಗುನಗಾ ದಂಪತಿಗಳಿಗೆ, ವಿಘ್ನೇಶ್ ದೇವಾಡಿಗ, ಯಕ್ಷಗಾನ ಪ್ರಸಂಗಕರ್ತೆ ಶಾಂತಾ ವಾಸುದೇವ ಪೂಜಾರಿ ಹಾಗೂ ವಿದ್ಯಾರ್ಥಿನಿ ಕುಮಾರಿ ಶಲಿತಾ ಅವರ ಅಭಿಮಾನದ ನುಡಿಗಳೊಂದಿಗೆ ‘ಗುರುವಂದನೆ’ ಸಲ್ಲಿಸಲಾಯಿತು.
ತಮ್ಮ ಸಫಲತೆಗೆ ಕಾರಣರಾದ ಸಂಸ್ಥಾಪಕ ಗಣೇಶ ಗುನಗಾ ದಂಪತಿಗಳಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಸನ್ಮಾನ ಮಾಡಿದಾಗ, ಅವರ ಕಣ್ಣಾಲಿಗಳು ತುಂಬಿ ಬಂದವು.

ವಿಶೇಷ ಅತಿಥಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಈ ಸುಂದರ ಸಂಜೆಯ ಕಾರ್ಯಕ್ರಮದಲ್ಲಿ ಡ್ಯುಯಲ್ ಸ್ಟಾರ್ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಡ್ಡರ್ಸೆ, ಶ್ರೀ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಅಣ್ಣಯ್ಯ ಪೂಜಾರಿ, ವಾಸ್ತು ತಜ್ಞರು ಮತ್ತು ಪ್ರಸಂಗಕರ್ತರಾದ ಬಸವರಾಜ್ ಶೆಟ್ಟಿಗಾರ್.
ರಾಜಾಜಿ ನಗರದ ಗುರು ಕಾರುಣ್ಯ, ಫ್ಯಾಷನ್ ಡಿಸೈನರ್ ರವಿಕುಮಾರ್, ಆನಗಳ್ಳಿ, ಹಾಗೂ ಉದ್ಯಮಿಗಳಾದ ಶ್ರೀ ಕೃಷ್ಣ ಪೂಜಾರಿ ಚಕ್ರಮಕ್ಕಿ ಮುಂತಾದ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಅವರಿಂದ ‘ಶ್ವೇತ ಕುಮಾರ ಚರಿತ್ರೆ’ ಪ್ರಸಂಗದಿಂದ ಆಯ್ದ ಪದ್ಯಗಳ ಗಾನ ವೈಭವ ನಡೆಯಿತು.
ಸ್ವರ್ಣ ನೂಪುರದ ಚಿಣ್ಣರಿಂದ ‘ಭಾನು ಪೌತ್ರ’ ಎಂಬ ಪೌರಾಣಿಕ ಕಥಾನಕವು ಅಚ್ಚುಕಟ್ಟಾಗಿ ಪ್ರದರ್ಶನಗೊಂಡಿತು. ಲಘು ಉಪಹಾರ ಮತ್ತು ಸಿಹಿ ತಿಂಡಿ ತುಂತುರು ಮಳೆಯಲ್ಲಿ ಎಲ್ಲರನ್ನೂ ಬೆಚ್ಚಗಿರಿಸಿತ್ತು.
ಮಂಜುನಾಥ ಹಿಲಿಯಾಣ ಅವರು ಸುಂದರ ನಿರೂಪಣೆಯೊಂದಿಗೆ ಕಾರ್ಯಕ್ರಮಕ್ಕೆ ಕಾವ್ಯದ ರೂಪ ನೀಡಿ ವಂದನಾರ್ಪಣೆ ಸಲ್ಲಿಸಿದರು.
Kundapura Sri Swarnupura Yakshagana Mandali kinnara Sambrama in Kannada News



