ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾದ ವಿಚಾರ ಎಲ್ಲರಿಗೂ ತಿಳಿದಿರುವ ವಿಷಯ. ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಸಂಪೂರ್ಣ ಗ್ರಾಮವನ್ನೇ ಸ್ಥಳಾಂತರಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ ಮಾಹಿತಿ ನೀಡಿದ್ದು, ಉತ್ಖನನ ಕಾರ್ಯಕ್ಕೆ ಯಾವುದೇ ಅಡ್ಡಿ ಬರಬಾರದು ಎಂಬ ದೃಷ್ಠಿಯಿಂದ ಸಂಪೂರ್ಣ ಗ್ರಾಮವನ್ನೇ ಸ್ಥಳಾಂತರಿಸಲು ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಲಕ್ಕುಂಡಿಯಲ್ಲಿ ಮನೆ ನಿರ್ಮಾಣದ ಸಂದರ್ಭದಲ್ಲಿ ದೊರೆತ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ ಹಾಗೂ ಗಂಗವ್ವ ರಿತ್ತಿ ಅವರನ್ನು ಸರ್ಕಾರ ವಿಶೇಷವಾಗಿ ಸನ್ಮಾನಿಸಲಿದೆ. ಈ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಹಾಗೂ ಮನೆ ನಿರ್ಮಾಣಕ್ಕೆ ಸರ್ಕಾರವೇ ನಿವೇಶನ ಒದಗಿಸಲಿದೆ. ಜೊತೆಯಲ್ಲಿ ಬಾಲಕ ಪ್ರಜ್ವಲ್ಗೆ ದ್ವಿತೀಯ ಪಿಯುಸಿವರೆಗೂ ಉಚಿತ ಶಿಕ್ಷಣ ನೀಡಲಿದ್ದೇವೆ ಎಂದು ಸಚಿವ ಎಚ್.ಕೆ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿಗೆ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರಯಾಣ : ಫಲಿಸಲಿದೆಯೇ ಪ್ರಾರ್ಥನೆ !
ಲಕ್ಕುಂಡಿ ಗ್ರಾಮದಲ್ಲಿ ಅಮೂಲ್ಯ ಪುರಾತನ ವಸ್ತುಗಳು ಇರಬಹುದು ಎಂಬ ಅನುಮಾನವಿದೆ. ಹೀಗಾಗಿ ಸಂಪೂರ್ಣ ಗ್ರಾಮವನ್ನೇ ಸ್ಥಳಾಂತರಿಸಲು ಚಿಂತಿಸಿದ್ದೇವೆ. ಗ್ರಾಮ ಸ್ಥಳಾಂತರಗೊಂಡ ಬಳಿಕ ಪುರಾತತ್ವ ಇಲಾಖೆ ಇಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ಖನನ ಕಾರ್ಯ ನಡೆಸಲಿದೆ. ಇದರಿಂದ ನಮ್ಮ ಇತಿಹಾಸವನ್ನು ಅರಿಯುವುದು ಮತ್ತಷ್ಟು ಸುಲಭವಾಗಲಿದೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.


