ಪಡಿತರ ಪಡೆಯಲು ಹೊಸ ಸೌಲಭ್ಯ! ಒಂದು ಬಾರಿ ಬಯೋಮೆಟ್ರಿಕ್ ನೀಡಿದರೆ ಸಾಕು
ಮೇ ಮತ್ತು ಜೂನ್ ತಿಂಗಳ ಪಡಿತರ ವಿತರಣೆಯನ್ನು ಆಹಾರ ಇಲಾಖೆ ಆರಂಭಿಸಿದ್ದು, ಗ್ರಾಹಕರ ಅನುಕೂಲಕ್ಕಾಗಿ ಎರಡು ಬಾರಿ ಬಯೋಮೆಟ್ರಿಕ್ ಬದಲಿಗೆ ಒಂದು ಬಾರಿ ದೃಢೀಕರಣಕ್ಕೆ ಅವಕಾಶ ಕಲ್ಪಿಸಿದೆ.

ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿ ನೀಡಿದೆ. ಮೇ ಮತ್ತು ಜೂನ್ ತಿಂಗಳ ಪಡಿತರ ವಿತರಣೆಯನ್ನು ಆರಂಭಿಸಿರುವ ಇಲಾಖೆ, ವಿತರಣಾ ಪ್ರಕ್ರಿಯೆಯನ್ನು ಸರಳಗೊಳಿಸಲು ಹೊಸ ಕ್ರಮ ಜಾರಿಗೊಳಿಸಿದೆ.
ಇತ್ತೀಚೆಗೆ ಒಟಿಪಿ (OTP) ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಬಯೋಮೆಟ್ರಿಕ್ ಮೂಲಕ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಆದರೆ ಸರ್ವರ್ ಸಮಸ್ಯೆ ಮತ್ತು ತಾಂತ್ರಿಕ ಅಡಚಣೆಗಳಿಂದ ಹಲವು ಗ್ರಾಹಕರು ಸಮಯಕ್ಕೆ ಸರಿಯಾಗಿ ಪಡಿತರ ಪಡೆಯಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಎರಡು ಬಾರಿ ಬಯೋಮೆಟ್ರಿಕ್ ಪಡೆಯುವ ಬದಲು ಒಂದು ಬಾರಿ ಮಾತ್ರ ದೃಢೀಕರಣ ಪಡೆದು ಪಡಿತರ ವಿತರಿಸಲು ಸೂಚನೆ ನೀಡಲಾಗಿದೆ. ಇದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಜನರ ನಿರೀಕ್ಷೆಯ ಸಮಯ ಕಡಿಮೆಯಾಗುವ ನಿರೀಕ್ಷೆ ಇದೆ.
ಜೂನ್ 5ರಿಂದ ಎರಡು ತಿಂಗಳ ಪಡಿತರ ವಿತರಣಾ ಕಾರ್ಯ ಆರಂಭವಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿತರಣೆ ನಡೆಯುತ್ತಿದೆ. ಹೆಚ್ಚಿನ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪಡಿತರ ತಲುಪಿಸುವುದು ಇಲಾಖೆಯ ಉದ್ದೇಶವಾಗಿದೆ.
ಗ್ರಾಹಕರು ಹಿಂದಿನಂತೆ ಒಟಿಪಿ ವ್ಯವಸ್ಥೆಯನ್ನೂ ಮರುಜಾರಿಗೊಳಿಸುವಂತೆ ಬೇಡಿಕೆ ಇಟ್ಟಿದ್ದು, ಬಯೋಮೆಟ್ರಿಕ್ ಜೊತೆಗೆ ಪರ್ಯಾಯ ವ್ಯವಸ್ಥೆ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ.



