ಕೋಟ : ಮಟ್ಕಾ ಜುಗಾರಿ 3 ಕಡೆ ಪೊಲೀಸರ ದಾಳಿ, 3 ಮಂದಿ ಅರೆಸ್ಟ್

ಕೋಟ : ಮಟ್ಕಾ ಜೂಜಾಟ (Kota Matka Jugari police raid) ಆಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಹಲವರನ್ನು ಬಂಧಿಸಿರುವ ಘಟನೆ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಾಳಿಯ ವೇಳೆ ನಗದು ವಶ ಪಡಿಸಿಕೊಳ್ಳಲಾಗಿದೆ.
ಕೋಟ ಪೊಲೀಸ್ ಠಾಣೆಯ ಪೊಲೀಸರು ಬ್ರಹ್ಮಾವರ ತಾಲ್ಲೂಕಿನಲ್ಲಿ ಮೂರು ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿದ್ದಾರೆ.
ಮೂರು ಪ್ರಕರಣಗಳಲ್ಲೂ, ಬಂಧಿತರು ತಾವು ಸ್ವಂತ ಲಾಭಕ್ಕಾಗಿ ಜೂಜಾಟ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದು, ಈ ಹಣವನ್ನು ಕಾಡೂರಿನ ಕೃಷ್ಣಯ್ಯ ಎಂಬುವರಿಗೆ ನೀಡುತ್ತಿದ್ದು, ಆತನು ತಮಗೆ ಕಮಿಷನ್ ನೀಡುತ್ತಿದ್ದನೆಂದು ತಿಳಿಸಿದ್ದಾರೆ.
ಆಗಸ್ಟ್ 19 ರಂದು ಸಂಜೆ 6:00 ಗಂಟೆಗೆ ಕೋಟ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಅವರು ನಂಚಾರು ಜಂಕ್ಷನ್ ಬಳಿ ನಡೆಸಿದ ದಾಳಿಯಲ್ಲಿ ದೇವೇಂದ್ರ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಆತನಿಂದ ₹4,550 ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಫೇಸ್ಬುಕ್ ಜಾಹೀರಾತು ನಂಬಿ 3 ಲಕ್ಷ ಕಳೆದುಕೊಂಡ ವ್ಯಕ್ತಿ
ಅದೇ ದಿನ ರಾತ್ರಿ 7:15 ಗಂಟೆಗೆ ಉಪನಿರೀಕ್ಷಕಿ ಸುಧಾ ಪ್ರಭು ಅವರು ನಂಚಾರು ಬೊಬ್ಬರ್ಯ ಕೊಡ್ಲು ಬಳಿ ದಾಳಿ ನಡೆಸಿ ಉದಯ ಭಾಸ್ಕರ ಎಂಬುವರನ್ನು ಬಂಧಿಸಿದ್ದಾರೆ. ಅವರಿಂದ ₹2,270 ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ವಶಕ್ಕೆ ಪಡೆಯಲಾಗಿದೆ.
ಇನ್ನು ರಾತ್ರಿ 8:15 ಗಂಟೆಗೆ ಉಪನಿರೀಕ್ಷಕ ಪ್ರವೀಣ್ ಕುಮಾರ್ ಅವರು ಶಿರಿಯಾರ ಗ್ರಾಮದ ಸ್ಯಾಬ್ರಕಟ್ಟೆ ಜಂಕ್ಷನ್ ಬಳಿ ದಾಳಿ ನಡೆಸಿ ಶಿವರಾಜ್ ಎಂಬುವರನ್ನು ಬಂಧಿಸಿದ್ದಾರೆ. ಅವರ ಬಳಿಯಿಂದ ₹1,830 ನಗದು, ಮಟ್ಕಾ ಚೀಟಿ ಹಾಗೂ ಬಾಲ್ ಪೆನ್ ಅನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ : ಚಿನ್ನದ ಉಂಗುರ ಖರೀದಿಗೆ ವ್ಯಾಪಾರಿಗೆ ವಂಚನೆ
ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸುಧಾ ಪ್ರಭು ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Kota Matka Jugari police raid 3 arrest Kannada News



