ಪರಶುರಾಮ ಥೀಂ ಪಾರ್ಕ್ ಸ್ವಚ್ಛತಾ ಕಾರ್ಯಕ್ಕೆ ಜಿಲ್ಲಾಡಳಿತ ಆದೇಶ: ವಿ ಸುನೀಲ್ ಕುಮಾರ್ ಸಂತಸ
Parashurama Theme Park: ಉಡುಪಿ: ಪರಶುರಾಮ ಥೀಂ ಪಾರ್ಕ್ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಮುಂದಾಗಿರುವ ಉಡುಪಿ ಜಿಲ್ಲಾಡಳಿತದ ಕ್ರಮವನ್ನು ಸ್ವಾಗತಿಸುತ್ತೇನೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹೇಳಿದ್ದಾರೆ. ಪರಶುರಾಮ ಥೀಂ ಪಾರ್ಕ್ ಸ್ವಚ್ಛಗೊಳಿಸಲು ಜಿಲ್ಲಾಡಳಿತಕ್ಕೆ ಗಡುವು ನೀಡಿದ ಬೆನ್ನಲ್ಲೇ ಸಕಾರಾತ್ಮಕ ಸ್ಪಂದನೆ ನೀಡಿದ ಜಿಲ್ಲಾಧಿಕಾರಿಗಳ ನಡೆ ಸಂತಸ ತಂದಿದೆ ಎಂದು ಅವರು ಹೇಳಿದರು.
ಈ ವಿಚಾರವಾಗಿ ಕಾರ್ಕಳದಲ್ಲಿ ಮಾತನಾಡಿದ ಅವರು, ಪರಶುರಾಮ ಥೀಂ ಪಾರ್ಕ್ ವಿಚಾರದಲ್ಲಿ ನಮ್ಮ ನಡೆ ಏನು ಎಂಬುದು ಸರ್ಕಾರಕ್ಕೆ ಕೊನೆಗೂ ಅರಿವಾಗಿದೆ. ಪರಶುರಾಮ ಥೀಂ ಪಾರ್ಕ್ ಭದ್ರತೆ ಹಾಗೂ ಸ್ವಚ್ಛತೆ ವಿಚಾರದಲ್ಲಿ ಅನುಸರಣಾ ವರದಿ ನೀಡುವಂತೆ ಜಿಲ್ಲಾಡಳಿತ ನಿರ್ಮಿತಿ ಕೇಂದ್ರಕ್ಕೆ ಸೂಚನೆ ನೀಡಿದೆ. ಜೊತೆಗೆ ಸ್ವಚ್ಛತಾ ಕಾರ್ಯವನ್ನೂ ಇಲಾಖೆಯ ವತಿಯಿಂದಲೇ ನಿರ್ವಹಿಸುವಂತೆ ಸೂಚಿಸಿದೆ. ಸ್ವಚ್ಛತೆಯ ಜೊತೆಗೆ ಪಾರ್ಕ್ನ ರಕ್ಷಣೆ ಕಡೆಗೂ ಗಮನ ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೀರೂರು ಪರ್ಯಾಯಕ್ಕೆ ಕ್ಷಣಗಣನೆ : ವೇದವರ್ಧನ ತೀರ್ಥರ ಪೀಠಾರೋಹಣ, ಅನುದಾನ ಗೊಂದಲ
ಅಲ್ಲದೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲ್ಲಿ ಒಂದು ತಿಂಗಳುಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು. ಇಲ್ಲವಾದಲ್ಲಿ ಒಂದೊಂದು ಯುವಕ ಸಂಘಕ್ಕೆ ಒಂದೊಂದು ದಿನ ಈ ಜವಾಬ್ದಾರಿ ನೀಡುತ್ತೇನೆ. 2027ರಲ್ಲಿ ಕಾರ್ಕಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಈ ವೇಳೆಗೊಳಗಾಗಿ ಪರಶುರಾಮ ಥೀಮ್ ಪಾರ್ಕ್ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗುವಂತೆ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಬೇಕು. ಮಹಾಮಸ್ತಕಾಭಿಷೇಕಕ್ಕೆ ಆಗಮಿಸಿದವರು ಪರಶುರಾಮ ಥೀಮ್ ಪಾರ್ಕ್ ವೀಕ್ಷಣೆಗೆ ಬರುವಂತಾಗಬೇಕು ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.



