ಬ್ರಹ್ಮಾವರ: ಪರವಾನಗಿ ಇಲ್ಲದೆ ಜಲ್ಲಿಕಲ್ಲು ಅಕ್ರಮ ಸಾಗಾಟ; ಟಿಪ್ಪರ್ ವಶ, ಚಾಲಕನ ಅರೆಸ್ಟ್
Brahmavar News: ಬ್ರಹ್ಮಾವರ: ಪರವಾನಗಿ ಮತ್ತು ರಾಜಧನ ಪಾವತಿಸದೆ ಜಲ್ಲಿಕಲ್ಲನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಟಿಪ್ಪರ್ ವಾಹನವನ್ನು ವಶಕ್ಕೆ ಪಡೆದು, ಚಾಲಕನನ್ನು ಅರೆಸ್ಟ್ ಮಾಡಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಭಟ್ಕಳ ತಾಲೂಕು ಮುರುಡೇಶ್ವರದ ಮೋಹನ ಎಸ್ ಶೆಟ್ಟಿ (52 ವರ್ಷ) ಬಂಧಿತ ಚಾಲಕ. ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶವಾಣಿ ಜಂಕ್ಷನ್ ಬಳಿಯಲ್ಲಿ ಬ್ರಹ್ಮಾವರ(Brahmavar) ಠಾಣೆಯ ಉಪನಿರೀಕ್ಷಕರಾದ ಅಶೋಕ್ ಮಾಳಾಬಗಿ ವಾಹನ ತಪಾಸಣೆ ನಡೆಸುವ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ಹೋಗುತ್ತಿದ್ದ ಕೆಎ 47 7766 ನಂಬರಿನ ಟಿಪ್ಪರ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆಯಲ್ಲಿ ಚಾಲಕನ ಬಳಿಯಲ್ಲಿ ವಿಚಾರಣೆ ನಡೆಸಿದಾಗ ಅಕ್ರಮವಾಗಿ ತಾನು ಸಾಗಾಟ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ.
Also Read: ಉಡುಪಿ: ಹೋಟೆಲ್ ರೂಂನಲ್ಲಿ ಒಡಿಸ್ಸಾ ಉದ್ಯಮಿ ಅನುಮಾನಾಸ್ಪದ ಸಾವು
ಜಲ್ಲಿಕಲ್ಲನ್ನು ಕಾರ್ಕಳದ ಬೆಳ್ಮಣ್ ಕ್ರಷರ್ ಕೋರೆಯಿಂದ ಲೋಡ್ ಮಾಡಿಕೊಂಡು ಹೋಗುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಟಿಪ್ಪರ್ನ ಹಿಂಬದಿಯ ಬಾಡಿಯಲ್ಲಿ ಸುಮಾರು 3 ಯುನಿಟ್ ಜಲ್ಲಿಕಲ್ಲು (ಅಂದಾಜು ಮೌಲ್ಯ 15,000 ರೂ.) ಇರುವುದು ಪತ್ತೆಯಾಗಿದೆ.
ಆರೋಪಿ ಮೋಹನ ಶೆಟ್ಟಿಯವರು ಯಾವುದೇ ಪರವಾನಿಗೆ ಹೊಂದದೇ, ಸರ್ಕಾರಕ್ಕೆ ರಾಜಧನ ವಂಚಿಸಿ, ಸರಕಾರದ ಸೊತ್ತಾದ ಜಲ್ಲಿಕಲ್ಲನ್ನು ಕಳ್ಳತನದಿಂದ ಸಾಗಾಟ ಮಾಡಿರುವುದು ತಪಾಸಣೆ ವೇಳೆ ದೃಢಪಟ್ಟಿದೆ.
Also Read: ಕಾರ್ಕಳದಲ್ಲಿ ಭೀಕರ ದುರಂತ: ನೀರಿನ ಟ್ಯಾಂಕ್ ಬಿದ್ದು ಕಾರ್ಮಿಕ ಸಾವು
ಪೊಲೀಸರು ಟಿಪ್ಪರ್ ವಾಹನ ಮತ್ತು ಜಲ್ಲಿಕಲ್ಲನ್ನು ಮಹಜರು ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



